ಸೊರಬ: ತಾಲ್ಲೂಕಿನಾದ್ಯಂತ ರೈತರು, ಸಾರ್ವಜನಿಕರು ಗೋವಿಗೆ ಪೂಜೆ ಸಲ್ಲಿಸಿ, ನಂತರ ಎತ್ತುಗಳು ಹಾಗೂ ಹಬ್ಬದ ಹೋರಿಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವ ಮೂಲಕ ದೀಪಾವಳಿ ಹಬ್ಬವನ್ನು ಬುಧವಾರ ಸಡಗರದಿಂದ ಆಚರಿಸಿದರು.
ಮನೆಗಳಲ್ಲಿ ಬಸವನ ಪಾದ ಬರೆದು, ಚಪ್ಪೆ ರೊಟ್ಟಿ, ಚಂಡಿಹೂವು, ಮಾವಿನಸೊಪ್ಪು ಕಟ್ಟಿ ಸಿಂಗರಿಸಿದ ಗೋವನ್ನು ಬೆಳಿಗ್ಗೆ 11ಕ್ಕೆ ಮನೆಯೊಳಗೆ ಕರೆತಂದು ಕುಟುಂಬದವರೆಲ್ಲ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮಗಳಲ್ಲಿ ಮಾವಿನ ಮತ್ತು ಚಂಡಿನ ಸೊಪ್ಪು ಹಾಗೂ ಬಾಳೆ ಕಂಬಗಳನ್ನು ಕಟ್ಟಿ ಸಿಂಗಾರಗೊಳಿಸಲಾಗಿತ್ತು.
ಇನ್ನೊಂದೆಡೆ ರೈತರು ದಕ–ಕರುಗಳನ್ನು ಹಾಗೂ ಹಬ್ಬದ ಹೋರಿಗಳನ್ನು ಮೈ ತೊಳೆದು, ಬಣ್ಣ, ಟೇಪು, ಗೊಂಡೆ ಹೂ, ಮೂಗುದಾರ, ಹಗ್ಗ, ಜೂಲ, ಬಲೂನು, ಗೆಜ್ಜೆಸರ ಕಟ್ಟಿ ಸಿಂಗರಿಸಿ ಊರೆಲ್ಲ ಮೆರವಣಿಗೆ ಮಾಡುವ ಜತೆಗೆ ಗ್ರಾಮದ ದೇವಸ್ಥಾನದ ಸುತ್ತ ಸುತ್ತು ಹಾಕಿಸಿದ್ದು ಆಕರ್ಷಕವಾಗಿತ್ತು. ಕೆಲವು ಗ್ರಾಮಗಳಲ್ಲಿ ಯುವಕರು ಹಬ್ಬ ಮಾಡುವ ಹೋರಿಗಳಿಗೆ ಕೊಬ್ಬರಿ ಸರ ಕಟ್ಟಿ, ಜೂಲ ಹಾಕಿ, ಟೇಪು, ಬಲೂನು, ಗೊಂಡೆ ಹೂಗಳ ಮೂಲಕ ಸಿಂಗರಿಸಿ ಪಟಾಕಿ ಹೊಡೆಯುವ ಮೂಲಕ ಬೆದರಿಸಿದರು.
ದೀಪಾವಳಿ ನಿಮಿತ್ತ ಗ್ರಾಮದ ಎಲ್ಲ ದೇವರುಗಳಿಗೆ ವಿಶೇಷ ಪೂಜೆ ಹಾಗೂ ಎಡೆ ಒಪ್ಪಿಸಿದರು. ಸಂಜೆ ಪ್ರತಿ ಮನೆಗಳ ಬಾಗಿಲು ಹಾಗೂ ಕಟ್ಟೆಗಳಲ್ಲಿ ದೀಪಗಳನ್ನು ಸಾಲಾಗಿ ಹಚ್ಚಿ ಸಂಭ್ರಮಿಸಲಾಯಿತು. ಪಟ್ಟಣ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಉತ್ಸಾಹಿ ಯುವಕರು ಅಂಟಿಕೆ-ಪಂಟಿಕೆ ಕಾರ್ಯಕ್ರಮ ನಡೆಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.