ADVERTISEMENT

ತೀರ್ಥಹಳ್ಳಿ: ‘ಪಿಎಸ್‌ಐ ಹಗರಣದ ಯಜಮಾನ ಎಲ್ಲಿರಬೇಕು’

ಆರಗ ಜ್ಞಾನೇಂದ್ರಗೆ ಡಿ.ಕೆ.ಶಿವಕುಮಾರ್‌ ಪ್ರಶ್ನೆಗಳ ಬಾಣ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 6:13 IST
Last Updated 9 ಫೆಬ್ರುವರಿ 2023, 6:13 IST
ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಭೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು.
ತೀರ್ಥಹಳ್ಳಿ ಪಟ್ಟಣದ ಸಂಸ್ಕೃತಿ ಮಂದಿರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಸಭೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದರು.   

ತೀರ್ಥಹಳ್ಳಿ: ‘ವಿಧಾನಸಭೆಯಲ್ಲಿ ಪಿಎಸ್‌ಐ ಹಗರಣ ನಡೆದಿಲ್ಲ ಎಂಬ ಉತ್ತರ ನೀಡುತ್ತಿದ್ದ ಆರಗ ಜ್ಞಾನೇಂದ್ರರ ಅವಧಿಯಲ್ಲೇ ಐಪಿಎಸ್‌ ಅಧಿಕಾರಿ, ಸಿಬ್ಬಂದಿಗಳು ಜೈಲಿಗೆ ಹೋಗುತ್ತಾರೆ. ಹಗರಣದ ರೂವಾರಿ ಜೈಲಿಗೆ ಹೋದರೆ ಯಜಮಾನ ಎಲ್ಲಿರಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು

ಬುಧವಾರ ಪಟ್ಟಣದ ಸಂಸ್ಕೃತಿ ಮಂದಿರದ ಆವರಣದಲ್ಲಿ ನಡೆದ ಕಾಂಗ್ರೆಸ್‌ ಪಕ್ಷದ ಪ್ರಜಾಧ್ವನಿ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಅಧಿಕಾರ ಶಾಶ್ವತವಲ್ಲ. ಜನಸಾಮಾನ್ಯರ ಮೇಲೆ ಕೇಸುಗಳನ್ನು ಹಾಕಿಸುತ್ತಿರುವ ಗೃಹಸಚಿವರ ಅವಧಿ 60 ದಿನಗಳು ಮಾತ್ರ. ಪೊಲೀಸ್‌ ಇಲಾಖೆಯ ಪ್ರತಿಯೊಂದು ಹುದ್ದೆಗೆ ದರಪಟ್ಟಿ ನಿಗದಿ ಮಾಡಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸೌಧದ ಗೋಡೆಗಳು ಕಾಸು ಕಾಸು ಎನ್ನುತ್ತಿವೆ ಎಂದು ವ್ಯಂಗ್ಯವಾಡಿದರು.

ADVERTISEMENT

‘ಅಡಿಕೆಗೆ ಎಲೆಚುಕ್ಕಿ ರೋಗ ತಗುಲಿದೆ ಅಂತ ಅಡಿಕೆ ಮರಗಳನ್ನು ಕಡಿತಲೆ ಮಾಡಬೇಕಾದರೆ ನಾವೇನು ಬೆಳೆಯಬೇಕು. ಜನರ ಸೇವೆಗೆ ಬಂದಿದ್ದೇನೆ ಎಂಬ ಜವಾಬ್ದಾರಿ ಮರೆತು ಸರ್ಕಾರಿ ಕಚೇರಿಗಳನ್ನು ಬಿಜೆಪಿ ಕಚೇರಿಯಾಗಿ ಪರಿವರ್ತಿಸಿದ್ದಾರೆ‘ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಆರೋಪಿಸಿದರು.

‘ಪಕ್ಷದೊಳಗಿನ ಸಣ್ಣಪುಟ್ಟ ವಿಚಾರ ದೊಡ್ಡದು ಮಾಡುವ ಅಗತ್ಯ ಇಲ್ಲ. ಒಗ್ಗಟ್ಟಿನಿಂದ ಸಂಘಟನೆ ಬಲಪಡಿಸುವ ಕೆಲಸ ಮಾಡಲಾಗುತ್ತದೆ. ಪಕ್ಷದ ಆದೇಶದಂತೆ ಕೆಲಸ ನಿರ್ವಹಿಸುತ್ತೇನೆ‘ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ಹೇಳಿದರು.

ವೇದಿಕೆಯಲ್ಲಿ ಮುಖಂಡರಾದ ಕೆ.ಎಚ್.‌ ಮುನಿಯಪ್ಪ, ಉಗ್ರಪ್ಪ, ಎಚ್.ಎಂ. ರೇವಣ್ಣ, ಸಲೀಂ ಅಹ್ಮದ್‌, ಮೋಟಮ್ಮ, ಚಂದ್ರಶೇಖರ್‌, ಬಿ.ವಿ.ಶ್ರೀನಿವಾಸ್‌, ಮಹಮ್ಮದ್‌ ನಲ್ಪಾಡ್‌, ಹೆಚ್.ಎಸ್.‌ ಸುಂದರೇಶ್‌ ಇದ್ದರು.

ಇದಕ್ಕೂ ಮುನ್ನ ಯುವ ಕಾಂಗ್ರೆಸ್‌ ವತಿಯಿಂದ ಬೆಜ್ಜವಳ್ಳಿಯಿಂದ ಪಟ್ಟಣದ ವರೆಗೆ ಸುಮಾರು 16 ಕಿಮೀ ಬೈಕ್‌ ರ‍್ಯಾಲಿ ನಡೆಯಿತು.

***

ಕ್ಷೇತ್ರದ ಜನತೆಗೆ ಯಾವುದೇ ಗೊಂದಲ ಬೇಡ. ಚುನಾವಣಾ ಪೂರ್ವ ಸರ್ವೆ ಕಾರ್ಯ ನಡೆಯುತ್ತಿದೆ. ಸಣ್ಣಪುಟ್ಟ ದೋಷಗಳನ್ನು ಪರಿಹರಿಸು ವ ಕೆಲಸ ಮಾಡಲಾಗುತ್ತದೆ. ಇಬ್ಬರು ಮುಖಂಡರು ವಿಧಾನಸೌಧದಲ್ಲಿ ಇರುತ್ತಾರೆ.

ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು

ತೀರ್ಥಹಳ್ಳಿಯ ಜನರನ್ನು ಸ್ಮರಿಸುತ್ತಿದ್ದ ಬಂಗಾರಪ್ಪ: ಮಧು ಬಂಗಾರಪ್ಪ

‘ಬಡವರಿಗೆ, ಶೋಷಿತ ವರ್ಗಗಳಿಗೆ ಭೂಮಿ ಹಕ್ಕು ಕೊಡಲು ಕಾಂಗ್ರೆಸ್‌ ಬಹಳ ಪ್ರಮುಖ ಪಾತ್ರ ವಹಿಸಿದೆ. ಶಿವಮೊಗ್ಗದಲ್ಲಿ ಸೆಕ್ಷನ್‌ 144 ಹಾಕಿಸುವ ಹುನ್ನಾರ ಹೆಚ್ಚು ದಿನಗಳು ನಡೆಯುವುದಿಲ್ಲ. ತೀರ್ಥಹಳ್ಳಿಯ ಜನರನ್ನು ಬಂಗಾರಪ್ಪ ಕೊನೆಯವರೆಗೂ ಸ್ಮರಿಸುತ್ತಿದ್ದರು. ಸೋತ ಸಂದರ್ಭದಲ್ಲೂ ಹೆಚ್ಚು ಮತ ಕೊಟ್ಟ ಜನ ಎಂಬ ಗೌರವ ಅವರಿಗಿತ್ತು. ಮುಖ್ಯಮಂತ್ರಿಯಾದ ಸಂದರ್ಭ ಫಾರಂ ನಂಬರ್ 50,‌ 53ರಡಿ ಬಡವರಿಗೆ ಭೂಮಿ ಹಕ್ಕು ದೊರಕಿಸಿಕೊಟ್ಟಿದ್ದಾರೆ. ರೈತರಿಗೆ ಉಚಿತ ವಿದ್ಯುತ್‌ ಸೌಲಭ್ಯ ಕಲ್ಪಿಸಿಕೊಟ್ಟ ಧೀಮಂತ ನಾಯಕ’ ಎಂದು ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧುಬಂಗಾರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.