
ಶಿವಮೊಗ್ಗ: ‘ವಾತ್ಸಲ್ಯ ಮರೆತ ಆಧುನಿಕ ಪ್ರಪಂಚದಲ್ಲಿ, ಉತ್ತಮ ವ್ಯಕ್ತಿತ್ವವುಳ್ಳ ವಿದ್ಯಾವಂತ ಸಮೂಹ ಬೇಕಿದೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿಭಾಗದಿಂದ ಸೋಮವಾರ ಪ್ರಥಮ ವರ್ಷದ ಎಂಸಿಎ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮನ್ನು ಸಲಹಿದ ಸಮಾಜಕ್ಕೆ ನಾವು ಸದಾ ಋಣಿಯಾಗಿರಬೇಕು. ಪ್ರಪಂಚಕ್ಕೆ ತರೆದುಕೊಳ್ಳುವಾಗ ಸಾಮಾಜಿಕ ಜವಾಬ್ದಾರಿ ಎಂಬುದು ಅತಿ ಮುಖ್ಯ. ತಾಯಿ ಇಂದಿನ ಅಗತ್ಯ ನೋಡಿದರೆ, ತಂದೆ ನಾಳೆಯ ಅಗತ್ಯತೆಯನ್ನು ನೋಡುತ್ತಾರೆ. ಓದು– ಬರಹ ಕಲಿಸುವುದು ನಿಜವಾದ ವಿದ್ಯಾಭ್ಯಾಸವಲ್ಲ. ಬದಲಿಗೆ ವಿನಯ ವಿಧೇಯತೆ, ಹೃದಯವಂತಿಕೆ ಕಲಿಸುವುದು ನಿಜವಾದ ವಿದ್ಯಾಭ್ಯಾಸ’ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ‘ಕಂಪ್ಯೂಟರ್ ಅಪ್ಲಿಕೇಶನ್ ಎಂಬುದು ದಿನನಿತ್ಯ ಬದಲಾಗುತ್ತಿರುವ ಪ್ರಚಲಿತ ವಿಚಾರವಾಗಿದೆ. ವರ್ತಮಾನದ ಚಿಂತನೆ ಎಂಬುದು, ಅಧ್ಯಯನಕ್ಕೆ ಬಹುದೊಡ್ಡ ಅವಶ್ಯಕತೆ. ಹೇಗೆ ಓದಬೇಕು ಎನ್ನುವ ಸ್ಪಷ್ಟತೆ ಇರಬೇಕು’ ಎಂದರು.
ಇದೇ ವೇಳೆ ಎಂಸಿಎ ವಿಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಯೋಗಾಲಯ ಮತ್ತು ಸಭಾಂಗಣವನ್ನು ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ವೈ.ವಿಜಯಕುಮಾರ್, ಸಂಶೋಧನಾ ಡೀನ್ ಎಸ್.ವಿ.ಸತ್ಯನಾರಾಯಣ, ಸಹಾಯಕ ಪ್ರಾಧ್ಯಾಪಕ ಎಸ್.ಪಿ.ರಾಘವೇಂದ್ರ, ಆದರ್ಶ.ಎಂ.ಜೆ, ಅಮೃತಾ ಉಪಸ್ಥಿತರಿದ್ದರು. ಎಂಸಿಎ ವಿಭಾಗದ ಮುಖ್ಯಸ್ಥ ಹೇಮಂತ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.