ಶಿವಮೊಗ್ಗ: ಸಚಿವ ಸ್ಥಾನ ದೊರೆಯದ ಕಾರಣ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಬಿಜೆಪಿ ಸೇರಿದ್ದಕ್ಕೆ ಅಸಮಾಧಾನ ಹೊರಹಾಕಿರಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಭಾನುವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಬಿಜೆಪಿ ತಪ್ಪು ಮಾಡಿದ್ದರೆ ತಿಳಿಸಲಿ ತಿದ್ದಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ಬಹಿರಂಗ ಹೇಳಿಕೆ ನಿಡುವುದು ಸರಿಯಲ್ಲ. ಅವರು ಹಿಂದೆ ಇದ್ದ ಕಾಂಗ್ರೆಸ್, ಜೆಡಿಎಸ್ ಸರಿ ಇದ್ದಿದ್ದರೆ ಆ ಪಕ್ಷಗಳನ್ನು ಏಕೆ ತೊರೆಯುತ್ತಿದ್ದರು? ಬಿಜೆಪಿ ಏಕೆ ಆಯ್ಕೆ ಮಾಡಿಕೊಂಡರು? ಪತ್ರಿಕಾಗೋಷ್ಠಿ ಕರೆದು ಯಾವ ಪಕ್ಷಗಳು ಸರಿ ಇವೆ ಎಂದು ತಿಳಿಸಲಿ ಎಂದು ಕುಟುಕಿದರು.
ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಅವರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಾಗಿದೆ ಎಂದು ವಿಶ್ವನಾಥ್ ಆಕ್ಷೇಪಿಸಿದ್ದಾರೆ. ಅನುದಾನ ನೀಡುವುದು ವೈಯುಕ್ತಿವಾಗಿ ಅಲ್ಲ. ವಿರೋಧ ಪಕ್ಷದ ನಾಯಕರ ಕ್ಷೇತ್ರಕ್ಕೆ ಅನುದಾನ ನೀಡಿದರೆ ಅದು ತಲುಪುವುದು ಸಾರ್ವಜನಿಕರಿಗೆ. ಈ ಸೂಕ್ಷ್ಮತೆಗಳು ಅವರಿಗೆ ಅರ್ಥವಾಗಬೇಕು ಎಂದರು.
ಕಾಂಗ್ರೆಸ್ನಿಂದ ಮಹಾ ಪಂಚಾಯತ್ ದುರುಪಯೋಗ:
ರೈತರ ಬೇಡಿಕೆ ಈಡೇರಿಕೆಗೆ ನಡೆಯುತ್ತಿರುವ ಮಹಾ ಪಂಚಾಯತ್ಗೆ ನಮ್ಮ ಸಹ ಮತವಿದೆ. ಆದರೆ, ಕಾಂಗ್ರೆಸ್ ರೈತರ ಹೆಸರಲ್ಲಿ ಪಂಚಾಯತ್ಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಹಿಂದೆ ಯಾವ ರೈತರೂ ಇಲ್ಲ. ಅದಕ್ಕಾಗಿ ರೈತ ಮುಖಂಡರಿಗೆ ಸಹಾಯ ಮಾಡುವ ನೆಪದಲ್ಲಿ ರೈತರ ಓಲೈಕೆಯಲ್ಲಿ ತೊಡಗಿದೆ. ರೈತರೂ ಕಾಂಗ್ರೆಸ್ ಜತೆ ಕೈಜೊಡಿಸಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂದು ಚಾಟಿ ಬೀಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.