ADVERTISEMENT

ಭದ್ರಾವತಿ: ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ರೈತ ಮಹಿಳೆ

ಕೆ.ಎನ್.ಶ್ರೀಹರ್ಷ
Published 17 ನವೆಂಬರ್ 2021, 4:43 IST
Last Updated 17 ನವೆಂಬರ್ 2021, 4:43 IST
ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಸುಜಾತ ಅವರು ನಿರ್ಮಿಸಿರುವ ಅಡಿಕೆ ತೋಟ.
ಭದ್ರಾವತಿಯ ಕೂಡ್ಲಿಗೆರೆಯಲ್ಲಿ ಸುಜಾತ ಅವರು ನಿರ್ಮಿಸಿರುವ ಅಡಿಕೆ ತೋಟ.   

ಭದ್ರಾವತಿ: ತಮಗಿರುವ ಮೂರು ಎಕರೆ ಜಮೀನಿನಲ್ಲಿ ಸಾವಯವ ಪದ್ಧತಿಯಲ್ಲಿ ಅಡಿಕೆ, ತೆಂಗು, ಬಾಳೆ ಬೆಳೆಯುವ ಮೂಲಕ ಯಶಸ್ಸಿನತ್ತ ಹೆಜ್ಜೆ ಇಟ್ಟಿದ್ದಾರೆ ರೈತ ಮಹಿಳೆ ಸುಜಾತ.

ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮದ ಮುಖ್ಯರಸ್ತೆಯ ಒಳ ತಿರುವಿನಲ್ಲಿ ತಂಪಾದ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಸುತ್ತಲೂ ಹಚ್ಚ ಹಸಿರಿನ ತೋಟ. ಇದರ ಜತೆಗೆ ಕುರಿ, ಕೋಳಿ ಸಾಕಾಣಿಕೆಯನ್ನೂ ಮಾಡುತ್ತಾ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಸುಜಾತ ಅವರಿಗೆ ಮಗಳು ಶಶಿರೇಖಾ ನೆರವಿಗೆ ನಿಂತಿದ್ದಾರೆ.

ಈ ಹಿಂದೆ ತಮ್ಮ ಜಮೀನನ್ನು ಗುತ್ತಿಗೆ ಕೊಟ್ಟಿದ್ದ ಸುಜಾತ ಅವರು ಅಡಿಕೆ ತೋಟ ಕಟ್ಟುವ ಕನಸಿನೊಂದಿಗೆ ಜಮೀನಿನಲ್ಲಿಯೇ ಮನೆ ಕಟ್ಟಿಕೊಂಡು ನೆಲೆ ನಿಂತಿದ್ದರು. ಇಂದು ಅವರು ಎಣಿಸಿದ್ದಕ್ಕಿಂತ ಹೆಚ್ಚಿನ ಫಸಲು ಬರುತ್ತಿದ್ದು, ಅವರ ವಿಶ್ವಾಸ ಇಮ್ಮಡಿಗೊಳಿಸಿದೆ.

ADVERTISEMENT

‘ಕೃಷಿಯಲ್ಲಿ ಪರಿಣತಿ ಹೊಂದಿಲ್ಲದ ನಾನು ಸ್ನೇಹಿತರು, ಸುತ್ತಲಿನ ಕೃಷಿಕರು ನೀಡಿದ ಸಲಹೆ, ಸಹಕಾರದ ಮೇರೆಗೆ ಪೂರ್ಣ ಸಮಯ ತೋಟದಲ್ಲಿ ಕಳೆಯಲು ಆರಂಭಿಸಿದೆ. ಅವರ ನೆರವಿನಿಂದ ಇರುವ ಜಾಗದಲ್ಲೇ ಬಾವಿ ತೆಗೆಯಿಸಿ ಬಹುಮುಖಿ ಬೆಳೆಗಳ ಪ್ರಯೋಗ ಆರಂಭಿಸಿದೆ’ ಎನ್ನುತ್ತಾರೆ ಸುಜಾತ.

‘ಕೃಷಿ ಕೆಲಸಕ್ಕೆ ಮಗಳು ಸಾಥ್ ನೀಡಿದ್ದರಿಂದ ಉತ್ಸಾಹ ಹೆಚ್ಚಿತು. ಹಸು, ಕುರಿ ಗೊಬ್ಬರ ಬಳಕೆ ಮಾಡಿದ್ದರ ಪರಿಣಾಮ ಹಚ್ಚಹಸಿರಿನ ಪರಿಸರ ನಿರ್ಮಾಣವಾಯಿತು. ಕೇವಲ ರಾಸಾಯನಿಕ ಬಳಕೆಯಿಂದ ಉತ್ತಮ ಫಸಲು ಸಂಪಾದಿಸಲು ಸಾಧ್ಯ ಇಲ್ಲ ಎಂಬ ಅನೇಕ ಹಿರಿಯರ ಸಲಹೆ ಸೂಚನೆ ಪಾಲಿಸಿದೆ. ಆರು ವರ್ಷದ ಅಡಿಕೆ ಗಿಡದಲ್ಲಿ ಮೂರನೇ ಬೆಳೆಯಾಗಿ 80 ಕ್ವಿಂಟಲ್ ಫಸಲು ಬಂದಿದೆ’ ಎಂದು ಕಳೆಕಟ್ಟಿ ನಿಂತಿರುವ ಮರದ ಸಾಲನ್ನು ತೋರಿಸಿ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.