ADVERTISEMENT

ಭದ್ರಾವತಿ: ‘ಸಹಕಾರ ಸಂಘದಿಂದ ಕೃಷಿಕರಿಗೆ ಅನುಕೂಲ’

​ಪ್ರಜಾವಾಣಿ ವಾರ್ತೆ
Published 9 ಜನವರಿ 2021, 5:37 IST
Last Updated 9 ಜನವರಿ 2021, 5:37 IST
ಭದ್ರಾವತಿ ದೊಡ್ಡಗೊಪ್ಪೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಗೊಂದಿ ಎಡನಾಲಾ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡವನ್ನು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಉದ್ಘಾಟಿಸಿದರು. ಶಾಸಕ ಬಿ.ಕೆ. ಸಂಗಮೇಶ್ವರ ಇದ್ದರು.
ಭದ್ರಾವತಿ ದೊಡ್ಡಗೊಪ್ಪೇನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಗೊಂದಿ ಎಡನಾಲಾ ನೀರು ಬಳಕೆದಾರರ ಸಹಕಾರ ಸಂಘದ ಕಟ್ಟಡವನ್ನು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಉದ್ಘಾಟಿಸಿದರು. ಶಾಸಕ ಬಿ.ಕೆ. ಸಂಗಮೇಶ್ವರ ಇದ್ದರು.   

ಭದ್ರಾವತಿ: ‘ಗ್ರಾಮೀಣ ಕ್ಷೇತ್ರಗಳ ಅಭಿವೃದ್ಧಿಯಾದರೆ ಮಾತ್ರ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಸಹಕಾರ ಸಂಘಗಳ ಪಾತ್ರ ಹಿರಿದು’ ಎಂದು ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.

ಇಲ್ಲಿನ ದೊಡ್ಡಗೊಪ್ಪೇನಹಳ್ಳಿ ಗ್ರಾಮದಲ್ಲಿ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಅನುದಾನದಡಿ ನಿರ್ಮಿಸಿರುವ ಗೊಂದಿ ಎಡನಾಲಾ ನೀರು ಬಳಕೆದಾರರ ಸಹಕಾರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಆರ್ಥಿಕ ಚೈತನ್ಯದಲ್ಲಿ ರೈತರ ಕೊಡುಗೆ ಅಪಾರ. ಪ್ರತಿ ರಂಗದಲ್ಲೂ ಕೃಷಿಕರು ತಮ್ಮನ್ನು ಗುರುತು ಮಾಡಿಕೊಂಡು ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.ಕೃಷಿಕರು ತಮ್ಮ ವ್ಯವಸಾಯ ಚಟುವಟಿಕೆ ಜತೆಗೆ ಕೃಷಿಯೇತರ ಕಸುಬುಗಳತ್ತ ತೊಡಗಿಸಿಕೊಳ್ಳುವ ಕೆಲಸ ಮಾಡಿದರೆ ಅರ್ಥಿಕ ಬಲವರ್ಧನೆ ಸಾಧಿಸಬಹುದು. ಇದರಲ್ಲಿ ರೈತ ಮಹಿಳೆಯರ ಪಾಲು ಹಿರಿದಾಗಿರಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಹಲವು ವರ್ಷಗಳಿಂದ ಅಚ್ಚುಕಟ್ಟು ಪ್ರಾಧಿಕಾರದಿಂದ ಆಗಬೇಕಾದ ಕೆಲಸಗಳು ಆಗದೆ ರೈತರು ತೊಂದರೆ ಎದುರಿಸಿದ್ದಾರೆ. ಈ ಕುರಿತು ಸಾಕಷ್ಟು ಮನವಿಗಳು ಬಂದಿದ್ದು, ಇದರ ಕುರಿತಾಗಿ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ’ ಎಂದರು.

ಶಾಸಕ ಬಿ.ಕೆ. ಸಂಗಮೇಶ್ವರ, ‘ನೀರು ಬಳಕೆದಾರರ ಸಹಕಾರ ಸಂಘಕ್ಕೆ ಕಟ್ಟಡದ ಕೊಡುಗೆ ಸಿಕ್ಕಿರುವುದು ಶ್ಲಾಘನೀಯ. ಇದನ್ನು ಸದ್ಬಳಕೆ ಮಾಡಿಕೊಂಡು ಯಶಸ್ವಿಯಾಗಿ ಸಂಘ ಮುನ್ನಡೆಸಿ’ ಎಂದು ಸಲಹೆ ನೀಡಿದರು.

ಗ್ರಾಮದ ಮುಖಂಡರಾದ ಗಂಗಣ್ಣ, ಸುಚಿತ್ರಾ, ಉಮಾಪತಿ, ಮೂಡಲಗಿರಿಯಪ್ಪ, ಡಿ.ಎಂ. ವಿಶ್ವನಾಥ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.