ADVERTISEMENT

ಸಮವಸ್ತ್ರ ಕೊಡಲು ರೈತರ ಒತ್ತಾಯ

ಸಾರ್ವಜನಿಕರ ಬಳಿ ಭಿಕ್ಷೆ ಕೇಳಿ ವಿನೂತನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 3:04 IST
Last Updated 9 ಸೆಪ್ಟೆಂಬರ್ 2022, 3:04 IST
ಸಾಗರದಲ್ಲಿ ತಾಲ್ಲೂಕು ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಬಣ) ಆಶ್ರಯದಲ್ಲಿ, ಆಮ್‍ಆದ್ಮಿ ಪಕ್ಷದ ಸಹಕಾರದೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು
ಸಾಗರದಲ್ಲಿ ತಾಲ್ಲೂಕು ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಬಣ) ಆಶ್ರಯದಲ್ಲಿ, ಆಮ್‍ಆದ್ಮಿ ಪಕ್ಷದ ಸಹಕಾರದೊಂದಿಗೆ ಗುರುವಾರ ಪ್ರತಿಭಟನೆ ನಡೆಸಿದರು   

ಸಾಗರ: ತಾಲ್ಲೂಕು ರೈತ ಸಂಘದ (ಡಾ. ಎಚ್.ಗಣಪತಿಯಪ್ಪ ಬಣ) ಆಶ್ರಯದಲ್ಲಿ, ಆಮ್‍ಆದ್ಮಿ ಪಕ್ಷದ ಸಹಕಾರದೊಂದಿಗೆ ಗುರುವಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಶೂ, ಸಾಕ್ಸ್ ವಿತರಣೆ ಮಾಡದಿರುವುದನ್ನು ಖಂಡಿಸಿ, ಸಾರ್ವಜನಿಕರ ಬಳಿ ಭಿಕ್ಷೆ ಕೇಳುವ ‌ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಅಂಗಡಿ ಮಾಲೀಕರ ಬಳಿ ಸರ್ಕಾರ ಆರ್ಥಿಕ ಸಂಕಷ್ಟದಲ್ಲಿದೆ. ಶೈಕ್ಷಣಿಕ ಚಟುವಟಿಕೆಗೆ ಮೂಲಸೌಲಭ್ಯ ಒದಗಿಸಲು ಹಣದ ನೆರವು ನೀಡಿ ಎಂದು ಭಿಕ್ಷೆ ಬೇಡುವ ಜೊತೆಗೆ ಹಣ ಸಂಗ್ರಹಿಸಿದರು.

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ,
ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ADVERTISEMENT

ಮೂರು ವರ್ಷಗಳಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ, ಶೂ, ಸಾಕ್ಸ್ ವಿತರಿಸಿಲ್ಲ. ಶಾಲೆ ಪ್ರಾರಂಭವಾಗಿ ಅರ್ಧ ವರ್ಷ ಕಳೆದರೂ ಮಕ್ಕಳಿಗೆ ಪೂರ್ಣಪ್ರಮಾಣದಲ್ಲಿ ಸಮವಸ್ತ್ರವನ್ನುವಿತರಿಸಿಲ್ಲ. ಒಂದು ವಾರದಲ್ಲಿ ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರ ಕೊಡದೆ ಹೋದಲ್ಲಿ ಭಿಕ್ಷೆ ಬೇಡಿದ ಹಣದಲ್ಲಿ ರಾಜ್ಯದ ಎಲ್ಲ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸಮವಸ್ತ್ರವನ್ನು ಖರೀದಿಸಿ ಪೋಸ್ಟ್ ಮಾಡಲಾಗುತ್ತದೆ ಎಂದುಸಂಘದ ಅಧ್ಯಕ್ಷ ದಿನೇಶ್ ಶಿರವಾಳ ಎಚ್ಚರಿಕೆನೀಡಿದರು.

ರೈತ ಸಂಘದ ಪ್ರಮುಖರಾದ ಹೊಯ್ಸಳ ಗಣಪತಿಯಪ್ಪ, ರಮೇಶ್ ಕೆಳದಿ, ಭದ್ರೇಶ್ ಬಾಳಗೋಡು, ಶಶಿಕುಮಾರ್, ಸೂರಜ್, ಚಂದ್ರಶೇಖರ್, ದೇವರಾಜ್, ಆಮ್‍ಆದ್ಮಿ ಪಕ್ಷದ ವಿಜಯಕುಮಾರ್, ಸತೀಶ್ ಕೆ. ಅದರಂತೆ, ಎಲ್.ವಿ.ಸುಭಾಷ್, ರಮೇಶ್, ಪ್ರಮುಖರಾದ ಜಿ.ಟಿ. ಸತ್ಯನಾರಾಯಣ, ಡಿ.ದಿನೇಶ್, ಓಂಕಾರ್ ಎಸ್.ವಿ., ಯಶವಂತ ಪಣಿ, ಶ್ರೀಧರ ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.