ಸಾಗರ: ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಸರ್ಕಾರಗಳು ರೈತಸ್ನೇಹಿ ಧೋರಣೆ ತೋರುವವರೆಗೂ ರೈತ ಸಂಘಟನೆಗಳ ಹೋರಾಟ ನಿರಂತರವಾಗಿರುವುದು ಅನಿವಾರ್ಯ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಹೇಳಿದರು.
ಸಮೀಪದ ವಡ್ನಾಲ ಗ್ರಾಮದಲ್ಲಿನ ಕಾಗೋಡು ಸತ್ಯಾಗ್ರಹದ ರೂವಾರಿ ಎಚ್.ಗಣಪತಿಯಪ್ಪ ಅವರ ಸಮಾಧಿ ಎದುರು ರೈತ ಸಂಘದ ವತಿಯಿಂದ ಸೋಮವಾರ ಏರ್ಪಡಿಸಿದ್ದ 42ನೇ ವರ್ಷದ ನರಗುಂದ ರೈತ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ 80ರ ದಶಕದಲ್ಲಿ ನರಗುಂದದಲ್ಲಿ ನಡೆದ ರೈತ ಹೋರಾಟದ ಸಂದರ್ಭದಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಅಂದಿನ ರಾಜ್ಯ ಸರ್ಕಾರ ಪ್ರತಿಭಟನಕಾರರ ಮೇಲೆ ಗೋಲಿಬಾರ್ ಮಾಡಿದ್ದು ಕರಾಳ ಅಧ್ಯಾಯವಾಗಿದೆ. ಪ್ರಭುತ್ವದ ಇಂತಹ ರೈತ ವಿರೋಧಿ ನೀತಿಗಳ ವಿರುದ್ಧ ರೈತ ಸಂಘಟನೆಗಳು ಸದಾ ಜಾಗೃತವಾಗಿರಬೇಕಿದೆ ಎಂದರು.
ಪ್ರಮುಖರಾದ ರಮೇಶ್ ಕೆಳದಿ, ರಾಮಚಂದ್ರಪ್ಪ ಮನೆಘಟ್ಟ, ಶಿವು ಮೈಲಾರಿಕೊಪ್ಪ, ಹೊಯ್ಸಳ ಗಣಪತಿಯಪ್ಪ, ಕಿರಣ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.