ADVERTISEMENT

‘ದೆಹಲಿ ಹೋರಾಟಕ್ಕೆ ರೈತರ ಹಿತ ಕಾಯುವ ಉದ್ದೇಶವಿಲ್ಲ’-ಕೆ.ಎಸ್.ಈಶ್ವರಪ್

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 4:57 IST
Last Updated 28 ಮಾರ್ಚ್ 2021, 4:57 IST
ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು
ತೀರ್ಥಹಳ್ಳಿಯ ಎಪಿಎಂಸಿ ಪ್ರಾಂಗಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು   

ತೀರ್ಥಹಳ್ಳಿ: ಸವಕಲು ನಾಣ್ಯದಂತಿರುವ ಕೆಲವು ಜನರು ರೈತರ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದಾರೆ. ರೈತರ ಹಿತ ಕಾಯುವ ಉದ್ದೇಶ ಹೋರಾಟಕ್ಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶನಿವಾರ ಪಟ್ಟಣದ ಬೊಬ್ಬಿ ತಿರುವು ಬಳಿ ಎಪಿಎಂಸಿ ಉಪಪ್ರಾಂಗಣದಲ್ಲಿ ಗೋದಾಮು, ಅಭಿವೃದ್ಧಿ ಕಾಮಗಾರಿ, ಯಡೇಹಳ್ಳಿ ಕೆರೆ ಬಳಿ ತಾಲ್ಲೂಕು ಸ್ತ್ರೀ ಶಕ್ತಿ ಭವನ ಉದ್ಘಾಟನೆ, ತಾಲ್ಲೂಕು ಆರ್ಯ ಈಡಿಗರ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿ ಕಾಯ್ದೆಗಳಿಂದ ರೈತರಿಗೆ ಅನುಕೂಲವಾಗಲಿದೆ. ಅಡಿಕೆ ಮೌಲ್ಯವರ್ಧನೆಗೊಳಿಸಿ ಗುಟ್ಕಾ ವಿರುದ್ಧ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ದೇಶ, ವಿದೇಶಗಳಲ್ಲಿ ಅಡಿಕೆಗೆ ವಿಶೇಷ ಮೌಲ್ಯವಿದೆ. ಉತ್ತಮ ಸಂಸ್ಕರಣೆಯಿಂದ ಗುಣಮಟ್ಟದ ಅಡಿಕೆ ಉತ್ಪಾದನೆಯ ಅಗತ್ಯವಿದೆ. ತೀರ್ಥಹಳ್ಳಿ ಭಾಗದ ಸಾಂಪ್ರದಾಯಿಕ ಅಡಿಕೆಗೆ ಇಂದಿಗೂ ಹೆಚ್ಚಿನ ಮನ್ನಣೆ ಇದೆ. ತೀರ್ಥಹಳ್ಳಿ ಎಪಿಎಂಸಿ ಮಾದರಿಯಲ್ಲಿ ರಾಜ್ಯದ ಎಲ್ಲೆಡೆ ಎಪಿಎಂಸಿಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ADVERTISEMENT

ಶಾಸಕ ಆರಗ ಜ್ಞಾನೇಂದ್ರ, ‘ಪ್ರಧಾನಿ ಮೋದಿ ಅವರ ವಿರುದ್ಧ ತಪ್ಪುಭಾವನೆ ಮೂಡಿಸಿ ರೈತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಹಣ ರೈತರ ಖಾತೆಗೆ ನೇರವಾಗಿ ಸಂದಾಯವಾಗಬೇಕು ಎಂದು ಕಾಯ್ದೆ ರಚಿಸಲಾಗಿದೆ. ಮಧ್ಯವರ್ತಿಗಳು, ದೊಡ್ಡ ವ್ಯಾಪಾರಸ್ಥರು ತಮ್ಮ ಹಿತಾಸಕ್ತಿಗಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಸವಾನಿ ವಿಜಯದೇವ್, ಎಪಿಎಂಸಿ ಅಧ್ಯಕ್ಷ ಸಾಲೇಕೊಪ್ಪ ರಾಮಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜಶೆಟ್ಟಿ, ಶಿವಮೊಗ್ಗ ರಂಗಾಯಣ ನಿರ್ದೇಶಕ ಸಂದೇಶ ಜವಳಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕಾಸರವಳ್ಳಿ ಶ್ರೀನಿವಾಸ್, ಭಾರತಿ ಬಾಳೇಹಳ್ಳಿ, ಕಲ್ಪನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.