ಶಿವಮೊಗ್ಗ : ಬಡವರಿಗೆ ನಿವೇಶನ ಕೊಡುವಂತೆ ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸದೇ ಹೋದರೇ ನ. 24ರಿಂದ ಜಿಲ್ಲಾಡಳಿತದ ವಿರುದ್ಧ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಆಧ್ಯಕ್ಷ ಬಿ.ಎಲ್. ರಾಜು ಹೇಳಿದರು.
ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ನ.18 ರಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದೆ, ಆದರೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಕೇಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಭದ್ರಾವತಿ ತಾಲ್ಲೂಕು ಬಿಳಕಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನವುಲೇ ಬಸಾಪುರ ಗ್ರಾಮದಲ್ಲಿ 5 ಎಕರೆ 35 ಗುಂಟೆ ಗ್ರಾಮಠಾಣಾ ಜಾಗವಿದೆ. ಅಲ್ಲಿ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಹಲವು ವಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದೇವೆ. ಈ ಹೋರಾಟದ ಹಿನ್ನೆಲೆಯಲ್ಲಿ 129 ನಿವೇಶನ ರಚಿಸಿ, 30 ಬಡವರಿಗೆ ನಿವೇಶನ ನೀಡುವುದಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಬಿಳಿಕಿ ಗ್ರಾಮ ಪಂಚಾಯ್ತಿ ಅಧಿಕಾರಿಗಳು ತಪ್ಪು ದಾಖಲೆಗಳನ್ನು ನೀಡಿದ ಪರಿಣಾಮ ಆಯ್ಕೆ ಪಟ್ಟಿ ವಾಪಸ್ ಆಗಿದೆ. ಇದಕ್ಕೆ ಪಂಚಾಯ್ತಿ ಅಧಿಕಾರಿಗಳೇ ಹೊಣೆಗಾರರು ಎಂದರು.
ಗ್ರಾಮಸ್ಥರಾದ ವರಲಕ್ಷ್ಮಿ, ಶಾರದಮ್ಮ, ಸರೋಜಮ್ಮ, ಲಕ್ಷ್ಮಮ್ಮ, ಬಸವರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.