ಸೊರಬ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 9ನೇ ಪುಣ್ಯತಿಥಿ ಅಂಗವಾಗಿ ಶನಿವಾರ ಪಟ್ಟಣದ ಬಂಗಾರಧಾಮದಲ್ಲಿರುವ ಸಮಾಧಿ ಸ್ಥಳಕ್ಕೆ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.
ಮಧು ಬಂಗಾರಪ್ಪ ಮಾತನಾಡಿ, ‘ಬಂಗಾರಪ್ಪ ಅವರ ಆದರ್ಶ ಹಾಗೂ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದಲ್ಲದೆ, ರಾಜಕೀಯ ಹಾಗೂ ಸಾಮಾಜಿಕ ಜೀವನದಲ್ಲಿಯೂ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುತ್ತಿದ್ದೇನೆ. ಕನ್ನಡ ನಾಡಿನ ನೆಲೆ, ಜನ, ಭಾಷೆ ವಿಷಯದಲ್ಲಿ ಎಸ್. ಬಂಗಾರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಗಳು ಬೇರೆ ಯಾವ ರಾಜಕಾರಣಿಗಳಿಗೂ ಬರಲು ಸಾಧ್ಯವಿಲ್ಲ’ ಎಂದರು.
‘ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಕೆಲವರ ಪುಂಡಾಟಿಕೆ ಮಿತಿ ಮೀರಿದ್ದು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾರೆ. ಖಾನಾಪುರ ತಾಲೂಕಿನ ಹಲಸಿಯಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಮಸಿ ಬಳಿದು ವಿರೂಪಗೊಳಿಸಿರುವುದು ಖಂಡನೀಯ’ ಎಂದರು.
‘ಸರ್ಕಾರ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳದೇ ಮೀನಮೇಷ ಎಣಿಸುತ್ತಿರುವ ಬಗ್ಗೆ ಹಲವು ಅನುಮಾನಗಳಿವೆ. ರಾಜ್ಯದಲ್ಲಿ ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸ ಲಾಗಿದ್ದು, ಆ ಬಗ್ಗೆ ಗೌರವವಿಲ್ಲದೆ ನಡೆದುಕೊಳ್ಳುತ್ತಿ ರುವುದು ವಿಪರ್ಯಾಸ’ ಎಂದರು.
ಅನಿತಾ ಮಧು ಬಂಗಾರಪ್ಪ, ಸೂರ್ಯ ಮಧು ಬಂಗಾರಪ್ಪ, ಕಾರವಾರ ಜಿಲ್ಲಾ ಕಾಂಗ್ರೆಸ್ ಮುಖಂಡ ಭೀಮಾನಾಯ್ಕ್, ನಾಗರಾಜ್ ಶಿವಮೊಗ್ಗ, ಶಿವಲಿಂಗಪ್ಪ, ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಸದಸ್ಯ ಶಿವಲಿಂಗೇಗೌಡ, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಶಿವಮೊಗ್ಗ ಜಿಲ್ಲಾ ಈಡಿಗರ ಸಂಘದ ಅಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಗಣಪತಿ, ರವಿ ಬರಗಿ, ವಕೀಲ ಕುಮಾರ್ ಸ್ವಾಮಿ, ಎಲ್.ಜಿ. ರಾಜಶೇಖರ್, ಎಂ.ಡಿ.ಶೇಖರ್, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಜಿ.ನಾಗರಾಜ್, ಪ್ರಸಾದ್ ಗುಲ್ಬರ್ಗ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.