ADVERTISEMENT

ಗೌರಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ -ಪಾರ್ವತೀಶ

​ಪ್ರಜಾವಾಣಿ ವಾರ್ತೆ
Published 29 ಮೇ 2022, 4:42 IST
Last Updated 29 ಮೇ 2022, 4:42 IST
ಪಾರ್ವತೀಶ
ಪಾರ್ವತೀಶ   

ಶಿವಮೊಗ್ಗ: ಗೌರಿ ಲಂಕೇಶ್ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲಂಕೇಶ್ ಮೀಡಿಯಾದ ಪಾರ್ವತೀಶ ಬಿಳಿದಾಳೆ ಹೇಳಿದರು.

ಲಂಕೇಶ್ ಮೀಡಿಯಾ ಕಂಪನಿಯ ಪಾಲುದಾರರಾಗಿದ್ದ ಗೌರಿ ಲಂಕೇಶ್ ಹೆಸರನ್ನು ಕೆಲವು ಸಂಘಟನೆಗಳು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಇಂತಹ ಸಂಘಟನೆಗಳ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಮಾಜಿ ನಕ್ಸಲರ ಪೈಕಿ ಕೆಲವರು ಸಂಘಟನೆಯನ್ನು ಕಟ್ಟಿಕೊಂಡಿದ್ದು, ಅವರಿಗೂ ಲಂಕೇಶ್ ಮೀಡಿಯಾಗಾಗಲೀ ಅಥವಾ ಗೌರಿಯವರಿಗಾಗಲೀ ಯಾವ ಹಕ್ಕುಬಾಧ್ಯತೆ ಸಂಬಂಧ ಇರುವುದಿಲ್ಲ. ಆದರೂ, ಗೌರಿ ಹತ್ಯೆಯ ಬಳಿಕ ಅವರ ಪತ್ರಿಕೋದ್ಯಮದ ವಾರಸುದಾರರು ಎಂಬಂತೆ ಸಾರ್ವಜನಿಕರನ್ನು ನಂಬಿಸುವ ಸಲುವಾಗಿ ‘ನ್ಯಾಯಪಥ’ ಎಂಬ ಪತ್ರಿಕೆಗೆ ಗೌರಿ ಲಂಕೇಶ್‌ ಫೋಟೊ ಹಾಕಿಕೊಂಡು ಪತ್ರಿಕಾ ನಿಯಮವನ್ನು ಹಾಗೂ ಘನತೆಯನ್ನು ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ADVERTISEMENT

ಯಾವುದೇ ಪತ್ರಿಕೆ ಆರ್‌ಎನ್‌ಐನಲ್ಲಿ ಹೇಗೆ ನೋಂದಣಿಯಾಗುತ್ತದೆಯೋ ಅದೇ ರೀತಿ ಶೀರ್ಷಿಕೆ ಇರಬೇಕು. ಬೇರೆಯವರ ಫೋಟೊಗಳನ್ನು ಬಳಸಿಕೊಳ್ಳುವುದು ಅನೈತಿಕ ಪತ್ರಿಕೋದ್ಯಮವಾಗುತ್ತದೆ. ಆದರೆ, ‘ನ್ಯಾಯಪಥ’ದ ಮೂಲಕ ಇಂತಹ ಕೆಲಸ ಮಾಡಲಾಗುತ್ತಿದೆ. ಲಂಕೇಶ್ ಮೀಡಿಯಾದ ಹಿತಾಸಕ್ತಿಗೆ ಹಾಗೂ ಗೌರವಕ್ಕೆ ಧಕ್ಕೆ ತರುತ್ತಿರುವವರು ನಾಡಿನ ಪ್ರಗತಿಪರರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.