ಸಾಗರ: ಪೋಷಕರು ಮಕ್ಕಳಿಗೆ ಐಸ್ ಕ್ರೀಮ್, ಪಾನಿಪೂರಿ ಕೊಡಿಸುವ ಜತೆಗೆ ಪುಸ್ತಕವೊಂದನ್ನು ಕೊಡಿಸಿ ಎಂದು ಸಾಹಿತಿ ನಾ.ಡಿಸೋಜ ಸಲಹೆ ನೀಡಿದರು.
ಇಲ್ಲಿನ ಸೇವಾ ಸಾಗರ ಶಾಲೆಯ ಅಜಿತ್ ಸಭಾಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಶನಿವಾರ ಏರ್ಪಡಿಸಿದ್ದ 8ನೇ ತಾಲ್ಲೂಕು ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪುಸ್ತಕ ಕೊಡಿಸುವ ಜೊತೆಗೆ ಆ ಪುಸ್ತಕದ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳುವ ಮೂಲಕ ಓದಿಗೆ ಅವರನ್ನು ಪ್ರೇರೇಪಿಸಬೇಕು. ಬದುಕಿನ ಹಲವು ಸತ್ಯಗಳನ್ನು ಸಾಹಿತ್ಯ ಅನಾವರಣಗೊಳಿಸುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಮರಾಠಿಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಹೆಚ್ಚು ಮನ್ನಣೆ ದೊರಕುತ್ತಿದೆ. ಮಕ್ಕಳ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅಲ್ಲಿ ಗ್ರಂಥಾಲಯಗಳಿವೆ. ನಮ್ಮ ರಾಜ್ಯದಲ್ಲೂ ಮಕ್ಕಳ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.
ಆಶಯ ಭಾಷಣ ಮಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್, ‘ಪೋಷಕರು ಮಕ್ಕಳಿಗೆ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಎಲ್ಲ ರೀತಿಯ ಜ್ಞಾನದ ಕಿಂಡಿಗಳನ್ನು ತೆರೆದಿಡಬೇಕು. ಸೌಲಭ್ಯಗಳಿಂದ ಮಕ್ಕಳು ಮೈಮರೆಯದಂತೆ ಎಚ್ಚರವಹಿಸಬೇಕು’ ಎಂದು ಕಿವಿಮಾತು ಹೇಳಿದರು.
ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷೆ ಸ್ಫೂರ್ತಿ ಆನಂದಪುರ, ಪ್ರಮುಖರಾದ ಅಶ್ವಿನಿಕುಮಾರ್, ವಿ.ಗಣೇಶ್, ಜಿ.ಪರಮೇಶ್ವರಪ್ಪ, ಡಿ.ಗಣಪತಪ್ಪ, ವಿ.ಟಿ. ಸ್ವಾಮಿ, ಪರಮೇಶ್ವರ ಕರೂರು, ಜಿ. ನಾಗೇಶ್, ಸತ್ಯನಾರಾಯಣ ಸಿರಿವಂತೆ, ಗುಡ್ಡಪ್ಪ ಜೋಗಿ, ಬಿ.ಡಿ.ರವಿಕುಮಾರ್, ಕೃಷ್ಣಮೂರ್ತಿ ಇದ್ದರು. ಮಾನ್ವಿ ಕರೂರು ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.