ಭದ್ರಾವತಿ: ಗ್ರಾಮದೇವತೆ ಹಳದಮ್ಮದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ರಾತ್ರಿ ಚಾಲನೆಗೊಂಡು ಬುಧವಾರ ಮುಂಜಾನೆ ತನಕ ನಡೆಯಿತು. ಗದ್ದುಗೆ ಪೂಜೆ ನಂತರ ದೇವಿಯ ಪ್ರವೇಶ ನಡೆಯಿತು.
ವಿವಿಧ ಪೂಜಾ ವಿಧಿವಿಧಾನ ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಲಾಯಿತು. ರಾತ್ರಿ ವಿಶೇಷ ಪೂಜೆ ನಂತರ ಅದ್ದೂರಿ ದೀಪಾಲಂಕಾರ ಮಂಟಪದಲ್ಲಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
ಉತ್ಸವ ಚಾಲನೆ ನೀಡಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಬಿ.ಕೆ. ಸಂಗಮೇಶ್ವರ, ‘ಕಳೆದ ಎರಡು ವರ್ಷದಿಂದ ಎದುರಾಗಿದ್ದ ಸಂಕಷ್ಟ ಸಮಯದಲ್ಲಿ ಜಾತ್ರೆಗಳು ನಡೆಯದೆ ನಿರಾಸೆಯ ಕಾರ್ಮೋಡ ಕವಿದಿತ್ತು. ಈಗ ನಡೆದಿರುವ ಉತ್ಸವ ಎಲ್ಲರ ಸಂಕಷ್ಟ ದೂರ ಮಾಡುವಂತಾಗಲಿ’ ಎಂದು ದೇವಿಯಲ್ಲಿ ಪ್ರಾರ್ಥನೆ ಮಾಡಲಾಗುವುದು’ ಹೇಳಿದರು.
ಉದ್ಘಾಟನೆ ನಂತರ ದೇವಿಯ ಮೆರವಣಿಗೆಗೆ ವಾದ್ಯಮೇಳ, ಪಟಾಕಿ ಸಿಡಿತದ ಅಬ್ಬರ, ಕಲಾ ತಂಡದ ಮೆರಗು ಸಿಕ್ಕಿದ್ದು ನೆರೆದವರ ಉತ್ಸಾಹ ಹೆಚ್ಚು ಮಾಡಿತ್ತು. ಪ್ರಮುಖ ರಸ್ತೆಯಲ್ಲಿ ಸಂಚರಿಸಿದ ಉತ್ಸವ ಬೆಳಿಗಿನ ಜಾವ ದೇವಸ್ಥಾನ ಪ್ರವೇಶ ಮಾಡಿತು. ದೇವಾಲಯ ಸಮಿತಿ ಅಧ್ಯಕ್ಷ ಸಂತೋಷ್, ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಶ್ರೇಯಸ್, ಅನುಪಮ ಚನ್ನೇಶ್, ಶಶಿಕಲಾ ನಾರಾಯಣಪ್ಪ ಅವರೂ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.