ADVERTISEMENT

ಕಾವಲು ಸಮಿತಿ ರಕ್ಷಣೆಯಲ್ಲೇ ಅಡಿಕೆ ದರ ಕುಸಿತ: ಮಂಜುನಾಥ ಗೌಡ

ಅಭಿನಂದನಾ ಸಮಾರಂಭದಲ್ಲಿ ಆರ್.ಎಂ. ಮಂಜುನಾಥ ಗೌಡ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 5:28 IST
Last Updated 13 ಡಿಸೆಂಬರ್ 2022, 5:28 IST
ತೀರ್ಥಹಳ್ಳಿಯಲ್ಲಿ ಕೆಪಿಸಿಸಿ ಸಹಕಾರ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಸಂಚಾಲಕ ಆರ್.‌ಎಂ. ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು.
ತೀರ್ಥಹಳ್ಳಿಯಲ್ಲಿ ಕೆಪಿಸಿಸಿ ಸಹಕಾರ ವಿಭಾಗದಿಂದ ಸೋಮವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಕೆಪಿಸಿಸಿ ಸಂಚಾಲಕ ಆರ್.‌ಎಂ. ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು.   

ತೀರ್ಥಹಳ್ಳಿ: ‘ಕಾಂಗ್ರೆಸ್‌ ಅವಧಿಯಲ್ಲಿ ಅಡಿಕೆಗೆ ಕೊಳೆರೋಗ ಬಂದಾಗ ₹ 85,000 ಕೋಟಿ ಪರಿಹಾರ ನೀಡಲಾಗಿತ್ತು. ಎಲೆಚುಕ್ಕಿ ರೋಗಕ್ಕೆ ₹ 4 ಕೋಟಿ ಪರಿಹಾರದ ಭರವಸೆ ನೀಡಿದ್ದರೂ ಇನ್ನೂ ಸಿಕ್ಕಿಲ್ಲ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದ ಅಡಿಕೆ ಕಾವಲು ಸಮಿತಿ ರಕ್ಷಣೆಯಲ್ಲೇ ಅಡಿಕೆ ದರ ₹ 38,000ಕ್ಕೆ ಕುಸಿತ ಕಂಡಿದೆ’ ಎಂದು ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ. ಮಂಜುನಾಥ ಗೌಡ ದೂರಿದರು.

ಪಟ್ಟಣದಲ್ಲಿ ಸೋಮವಾರ ಕೆಪಿಸಿಸಿ ಸಹಕಾರ ವಿಭಾಗದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ತಾಲ್ಲೂಕು ಮಟ್ಟದಲ್ಲಿ ಚುನಾವಣೆ ಪ್ರಚಾರ ನಡೆಸಿದ ಉದಾಹರಣೆಗಳಿಲ್ಲ. ಗುಜರಾತ್‌ ಚುನಾವಣೆಯಲ್ಲಿ ಮೋದಿ 28 ದಿನಗಳ ಪ್ರವಾಸ ಕೈಗೊಂಡು ಮತಯಾಚಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ 10 ಕಿ.ಮೀ. ರ‍್ಯಾಲಿ ಮಾಡಿದ್ದು ಚುನಾವಣಾ ಆಯೋಗ ಕ್ರಮ ಕೈಗೊ‌‌ಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಮಾರಾಟ ಮಾಡುವುದನ್ನೇ ಮೋದಿ ಕಾಯಕ ಮಾಡಿಕೊಂಡಿದ್ದಾರೆ. ಪದವೀಧರರು ಲೋಟ, ತಟ್ಟೆ ತೊಳೆಯುವ ಸ್ಥಿತಿಗೆ ದೇಶ ತಲುಪಿದೆ. ರೈಲ್ವೆ, ಬಸ್‌, ಆಸ್ಪತ್ರೆ, ಶಿಕ್ಷಣ ಎಲ್ಲವೂ ಮಾರಾಟವಾಗುತ್ತಿದೆ. ಬಿಜೆಪಿಗೆ ಸೇರುವವರ ಸಂಖ್ಯೆ ಕಡಿಮೆಯಾಗಿದ್ದು, ಪಕ್ಷದವರನ್ನೇ ಪಕ್ಷಕ್ಕೆ ಅಧಿಕೃತವಾಗಿ ಸೇರಿಸಿಕೊಳ್ಳುವುದು ಶಿವಮೊಗ್ಗದಲ್ಲಿ ನಡೆದಿದೆ ಎಂದು ಟೀಕಿಸಿದರು.

‘ಡಿಸಿಸಿ ಬ್ಯಾಂಕ್‌ ಸಾಲ ಪಡೆಯಲು ಆರ್‌ಎಸ್‌ಎಸ್‌ ಶಿಫಾರಸು ಪತ್ರ ಪಡೆಯಲಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದರೂ ಮಾಧ್ಯಮಗಳು ಗುಜರಾತ್‌ ಫಲಿತಾಂಶ ತೋರಿಸುತ್ತಿವೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆದರೆ 70 ಸೀಟು ಪಡೆಯಲು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿದೆ’ ಎಂದು ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.

ಅಭಿನಂದನಾ ಸಮಿತಿ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರಅಧ್ಯಕ್ಷತೆ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಶೆಟ್ಟಿ,ಶಿಕಾರಿಪುರ ಕಾಂಗ್ರೆಸ್‌ ಮುಖಂಡ ಗೋಣಿ ಮಾಲತೇಶ್‌, ಮುಖಂಡರಾದ ಪಲ್ಲವಿ ಜಿ., ಕಡ್ತೂರು ದಿನೇಶ್‌, ಟಿ.ಎಲ್. ಸುಂದರೇಶ್‌, ಬಂಡಿ ರಾಮಚಂದ್ರ, ಬಾಳೇಹಳ್ಳಿ ಪ್ರಭಾಕರ್‌, ಶೃತಿ ವೆಂಕಟೇಶ್‌, ಬೇಡನಬೈಲು ಯಲ್ಲಪ್ಪ, ಜೀನಾ ವಿಕ್ಟರ್‌ ಡಿಸೋಜಾ ಇದ್ದರು.

ಗೃಹಸಚಿವರು ಎಲೆಚುಕ್ಕಿ ರೋಗಕ್ಕೆ ಕಲ್ಲಂಗಡಿ ಹಣ್ಣಿಗೆ ಹೊಡೆಯುವ ಔಷಧ ವಿತರಿಸಿದ್ದಾರೆ. ಅಡಿಕೆ ದರ ₹ 15,000 ಕಡಿಮೆಯಾಗಿದೆ. ಅದನ್ನು ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ, ಬಿ.ವೈ. ರಾಘವೇಂದ್ರ ಕೊಡ್ತಾರಾ?

–ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ವಕ್ತಾರ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.