ಭದ್ರಾವತಿ: ಹಳದಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ದೇವಾಲಯದ ಮುಂಭಾಗದಲ್ಲಿರುವ ಸಿಡಿ ಕಂಬದಲ್ಲಿ ಸಿಡಿ ಹೊತ್ತ ನೀಲಪ್ಪ ಸಾವಿರಾರು ಭಕ್ತರ ಸಮ್ಮುಖದಲ್ಲಿ ‘ಉಧೋ ಉಧೋ’ ಎಂದು ಕೂಗುತ್ತಾ ದೇವಿಗೆ ಭಕ್ತಿ ಸಮರ್ಪಣೆ ಮಾಡಿದರು.
ಬೆಳಗಿನ ಸಿಡಿ ಉತ್ಸವಕ್ಕೂ ಮುನ್ನ ಸಹಸ್ರಾರು ಮಂದಿ ಸಿಡಿ ಕಂಬಕ್ಕೆ ಗೌರವದ ಪೂಜೆ ಸಲ್ಲಿಸಿದರು. ನಂತರ ನೀಲಪ್ಪ ಅವರನ್ನು ವಾದ್ಯಮೇಳದೊಂದಿಗೆ ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಬರಮಾಡಿಕೊಂಡರು.
ದೇವಿ ದರ್ಶನ ಪಡೆದ ನೀಲಪ್ಪ ಸಿಡಿ ಕಂಬಕ್ಕೆ ಪೂಜೆ ಸಲ್ಲಿಸಿ, ನಂತರ ಬೆನ್ನಿಗೆ ಸಿಡಿಕಂಬದ ಹಗ್ಗವನ್ನು ಬಿಗಿದುಕೊಂಡು ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ಕಂಬ ಎತ್ತರಕ್ಕೆ ಏರಿದಂತೆ ತನ್ನ ಕೈಕಾಲು ಆಡಿಸುತ್ತಾ ಉಧೋ ಉಧೋ ಎನ್ನುತ್ತಾ ದೇವಿಗೆ ಪ್ರದಕ್ಷಿಣೆ ಹಾಕಿದರು.
ತದನಂತರದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಇಳಿದ ನೀಲಪ್ಪ ಅವರನ್ನು ನೆರೆದ ಜನರು ಗೌರವದಿಂದ ನಮಸ್ಕರಿಸಿ ತಮ್ಮ ಭಕ್ತಿ ಸಮರ್ಪಿಸಿದರು. ತದನಂತದಲ್ಲಿ ಆರಂಭವಾದ ಮಕ್ಕಳ ಸಿಡಿಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
ಸಿಡಿ ಹರಕೆ ಪೂರೈಸಲು ಸಿದ್ಧರಾದ ಮಕ್ಕಳನ್ನು ತೊಟ್ಟಿಲಲ್ಲಿ ಕೂರಿಸಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸುವ ಮೂಲಕ ತಮ್ಮ ಭಕ್ತಿಯ ಬೇಡಿಕೆ ಈಡೇರಿಸುವಂತೆ ಪೋಷಕರು ದೇವಿಯಲ್ಲಿ ಬೇಡಿಕೊಂಡರು. ಸಿಡಿ ವೇಳೆ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಸಂತೋಷ, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಕೃಷ್ಣಮೂರ್ತಿ, ಮೈಲಾರಪ್ಪ, ಮಾರುತಿ ಮೆಡಿಕಲ್ಸ್ ಆನಂದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.