
ಸಾಗರ: ಕಲೆಯನ್ನು ಆರಾಧಿಸುವ ಮನೋಭಾವ ಮಲೆನಾಡಿನ ಜನರಲ್ಲಿ ಅಂತರ್ಗತವಾಗಿರುವುದು ವಿಶೇಷ ಸಂಗತಿಯಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹಾಲಪ್ಪ ಹರತಾಳು ಹೇಳಿದರು.
ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಶ್ರೀ ರಾಜರಾಜೇಶ್ವರಿ ಕೃಪಪೋಷಿತ ವಂಶವಾಹಿನಿ ಯಕ್ಷಮೇಳ ಮಂಗಳವಾರ ಏರ್ಪಡಿಸಿದ್ದ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಾವತಿ ನದಿಯ ಹಿನ್ನೀರಿನ ಜನರು ಮುಳುಗಡೆಯಿಂದಾಗಿ ತಮ್ಮ ನೆಲೆ ಕಳೆದುಕೊಂಡರೂ ಕಲೆಯೊಂದಿಗಿನ ತಮ್ಮ ನಂಟನ್ನು ಬಿಟ್ಟಿಲ್ಲ ಎಂಬುದಕ್ಕೆ ವಂಶವಾಹಿನ ಗುಂಡೂಮನೆ ಯಕ್ಷಮೇಳದ ಚಟುವಟಿಕೆಯೆ ಸಾಕ್ಷಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮದ್ದಲೆ ವಾದಕ ಮಂಜುನಾಥ ಗುಡ್ಡೆದಿಂಬ ದಂಪತಿಯನ್ನು ಸನ್ಮಾನಿಸಲಾಯಿತು. ಸುಬ್ರಾಯ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ಡಾ.ಎಚ್.ಎಸ್.ಮೋಹನ್, ಶಂಕರ ಶೆಟ್ಟಿ, ಕೋಟಾ ಶಿವಾನಂದ, ರಮೇಶ್ ಹೆಗಡೆ ಗುಂಡೂಮನೆ, ಬಿ.ಜಿ.ಚಂದ್ರಮೌಳಿಗೌಡ ಇದ್ದರು. ‘ಶಿವಸಾನಿಧ್ಯ’ ಎಂಬ ಯಕ್ಷಗಾನದ ಪ್ರಸಂಗವನ್ನು ಪ್ರಸ್ತುತ ಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.