ಹೊಸನಗರ: ಶರಾವತಿ ಹಿನ್ನೀರು ಇಳಿದ ಕಾರಣ ಸಂಪರ್ಕ ಸ್ಥಗಿತಗೊಳಿಸಿದ್ದ ಹಸಿರುಮಕ್ಕಿ ಲಾಂಚ್ ಸೋಮವಾರದಿಂದ ಮತ್ತೆ ಆರಂಭವಾಗಿದೆ. ಸದ್ಯ ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಉತ್ತಮ ಮಳೆಯಾದ ಕಾರಣ ಹಸಿರುಮಕ್ಕಿ ಹಿನ್ನೀರು ಪ್ರದೇಶದಲ್ಲಿ ನೀರು ಏರಿದ್ದು ಲಾಂಚ್ ಸಂಪರ್ಕ ಸಾಧಿಸಲು ಪೂರಕವಾಗಿದೆ. ಹಿನ್ನೀರು ಕುಸಿತದ ಕಾರಣ ಜೂನ್ 4ರಂದು ಲಾಂಚ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು.
ಲಾಂಚ್ ಸ್ಥಗಿತಗೊಂಡ ಕಾರಣ ಹಸಿರುಮಕ್ಕಿ ಮಾರ್ಗದ ಮೂಲಕ ತೆರಳುತ್ತಿದ್ದ ವಾಹನಗಳು ಹೊಸನಗರ, ನಗರ ಸಂಪೇಕಟ್ಟೆ ಮಾರ್ಗದ ಮೂಲಕ ಸಾಗಬೇಕಿತ್ತು.
ಹಿನ್ನೀರು ಏರಿಕೆಯಾದ ಕಾರಣ ಅಧಿಕಾರಿಗಳ ಸೂಚನೆ ಮೇರೆಗೆ ಸೋಮವಾರದಿಂದ ಲಾಂಚ್ ಸಂಪರ್ಕಕ್ಕೆ ಚಾಲನೆ ನೀಡಲಾಗುತ್ತಿದೆ. ಆರಂಭದಲ್ಲಿ ಲಘುವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ನೀರಿನ ಪ್ರಮಾಣ ಆಧರಿಸಿ ಬಸ್ ಸೇರಿದಂತೆ ದೊಡ್ಡ ವಾಹನಗಳಿಗೆ ಅವಕಾಶ ನೀಡಲಾಗುವುದು ಎಂದು ಲಾಂಚ್ ಚಾಲಕ ರವಿ ಹಸಿರುಮಕ್ಕಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.