ADVERTISEMENT

‘ಕಾಯ್ದೆ ಜಾರಿಯಿಂದ ಬಿಜೆಪಿಯವರ ಬಂಡವಾಳ ಖಾಲಿ’

ದ್ವೇಷ ಭಾಷಣ ಮಸೂದೆ ಮಂಡನೆ ಸ್ವಾಗತಾರ್ಹ; ಆಯನೂರು ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 4:25 IST
Last Updated 7 ಜನವರಿ 2026, 4:25 IST
ಆಯನೂರು ಮಂಜುನಾಥ್
ಆಯನೂರು ಮಂಜುನಾಥ್   

ಶಿವಮೊಗ್ಗ: ‘ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ದ್ವೇಷ ಭಾಷಣ ತಡೆ ಮಸೂದೆ ಜಾರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದು ಸ್ವಾಗತಾರ್ಹ. ಆದರೆ ದ್ವೇಷ ಭಾಷಣವನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿದ್ದ ಬಿಜೆಪಿಯ ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚನ್ನಬಸಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಲೇವಡಿ ಮಾಡಿದರು.

‘ದ್ವೇಷ ಭಾಷಣ ಮಾಡುವುದು ನಮ್ಮ ಹಕ್ಕು ಎಂದು ಬಿಜೆಪಿಯವರು ಭಾವಿಸಿದ್ದರು. ಈಗ ಹಕ್ಕಿಗೆ ಚ್ಯುತಿಯಾಗುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ಆ ಪಕ್ಷದ ನಾಯಕರಿಗೆ ಭಾಷೆ ಬಳಕೆ ವಿಚಾರದಲ್ಲಿ ಬೌದ್ಧಿಕ ಬಡತನವಿದೆ. ಹೀಗಾಗಿ ನಾಲಗೆಯ ಮೇಲೆ ಹಿಡಿತವೇ ಇಲ್ಲ. ಸಾಧ್ಯವಾದರೆ ಅವರೆಲ್ಲ ಯಾರಾದರೂ ಕನ್ನಡ ಶಿಕ್ಷಕರ ಹತ್ತಿರ ಭಾಷೆಯ ಕಲಿಕೆ ಆರಂಭಿಸಲಿ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.

‘ಹರುಕು ಬಾಯಿಗಳಿಗೆ ಹೊಲಿಗೆ ಹಾಕಬೇಕು ಎಂದು ಹಿಂದೊಮ್ಮೆ ನಾನೇ ಹೇಳಿದ್ದೆ. ಲಂಗು ಲಗಾಮು ಇಲ್ಲದೇ ಮಾತನಾಡುವವರ ಬಾಯಿಗೆ ಈಗ ಬೀಗ ಬಿದ್ದಿದೆ. ಸಿದ್ಧರಾಮಯ್ಯ ಅವರ ರುಂಡ ಚೆಂಡಾಡುವೆ, ನಮ್ಮ ಕೈಗೆ ಕತ್ತಿ ಕೊಡಿ, ರಕ್ತದಲ್ಲಿ ಓಕುಳಿ ಆಡುತ್ತೇವೆ ಎಂದೆಲ್ಲಾ ಅರಚಾಡುತ್ತಿದ್ದ ಬಾಯಿಗಳು ಈ ಕಾಯ್ದೆ ಜಾರಿಯಿಂದ ಬಂದ್ ಆಗಲಿವೆ’ ಎಂದು ಪರೋಕ್ಷವಾಗಿ ಶಾಸಕ ಎಸ್.ಎನ್.ಚನ್ನಬಸಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರಿಗೆ ಕುಟುಕಿದರು.

ADVERTISEMENT

ದ್ವೇಷ ಬಿತ್ತುವ, ಉದ್ರೇಕಗೊಳಿಸುವ ಭಾಷಣಗಳಿಗೆ ಕಡಿವಾಣ ಹಾಕಿ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಈ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿದೆ. ಬಿಜೆಪಿಯವರನ್ನು ಬಿಟ್ಟರೆ ರಾಜ್ಯದ ಎಲ್ಲ ಜನರು ಮೌನವಾಗಿ ಈ ಮಸೂದೆ ಒಪ್ಪಿಕೊಂಡಿದ್ದಾರೆ. ಆದರೆ, ಬಿಜೆಪಿಯವರಿಗೆ ಮಾತ್ರ ಇದರಿಂದ ದೊಡ್ಡ ಆತಂಕವಾಗಿದೆ ಎಂದರು.

ಈ ಕಾಯ್ದೆ ಎಲ್ಲ ಧರ್ಮ, ಸಮುದಾಯ ಹಾಗೂ ಪಕ್ಷದವರಿಗೂ ಅನ್ವಯಿಸುತ್ತದೆ. ಕಾಯ್ದೆ ಸಾರ್ವತ್ರಿಕವಾದುದು. ಅದನ್ನು ವಿರೋಧಿಸುವ ಬಿಜೆಪಿಯವರಿಗೆ ಏಕೆ ಸಂಕಟವೋ ಗೊತ್ತಿಲ್ಲ. ಇನ್ನಾದರೂ ಧರ್ಮ ನಿಂದನೆ, ಜಾತಿಗಳ ನಿಂದನೆಯ ಮಾತನಾಡುವವರು ಎಚ್ಚರಿಕೆಯಿಂದ ಇರಲಿ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಕಾಂಗ್ರೆಸ್ ಎಸ್.ಸಿ ಘಟಕದ ಜಿಲ್ಲಾ ಅಧ್ಯಕ್ಷ ಯು.ಶಿವಣ್ಣ. ಶಿವಾನಂದ್, ಹಿರಣ್ಣಯ್ಯ, ಧೀರರಾಜ್, ಲಕ್ಷ್ಮಣ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.