ADVERTISEMENT

ಆರೋಗ್ಯಕ್ಕೂ ಬೇಕಿದೆ ಅಧ್ಯಾತ್ಮ: ಗೋಣಿಬೀಡು ಶೀಲಸಂಪಾದನ ಮಠದ ಸಿದ್ಧಲಿಂಗ ಸ್ವಾಮೀಜಿ

ಚಂದ್ರಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 5:47 IST
Last Updated 1 ಮೇ 2022, 5:47 IST
ಶಿವಮೊಗ್ಗದಲ್ಲಿ ಶನಿವಾರ ಚಂದ್ರಗಿರಿ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಗೋಣಿಬೀಡು ಶೀಲಸಂಪಾದನ ಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದರು.
ಶಿವಮೊಗ್ಗದಲ್ಲಿ ಶನಿವಾರ ಚಂದ್ರಗಿರಿ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು. ಗೋಣಿಬೀಡು ಶೀಲಸಂಪಾದನ ಮಠದ ಸಿದ್ಧಲಿಂಗ ಸ್ವಾಮೀಜಿ ಇದ್ದರು.   

ಶಿವಮೊಗ್ಗ: ಆಧುನಿಕ ಜಗತ್ತಿನಲ್ಲಿ ವೈದ್ಯಕೀಯ ವಿಜ್ಞಾನ ಕ್ಷೇತ್ರ ಸಾಕಷ್ಟು ಮುಂದುವರಿದಿದ್ದರೂ ವೈದ್ಯಕೀಯ ವಿಜ್ಞಾನದ ಚಿಕಿತ್ಸೆಯ ಜತೆಗೆ ಅಧ್ಯಾತ್ಮ ಸಮ್ಮಿಳಿತವಾದಾಗ ಮಾತ್ರ ಆರೋಗ್ಯ ಸುಧಾರಿಸಲು ಸಾಧ್ಯ ಎಂದು ಗೋಣಿಬೀಡು ಶೀಲಸಂಪಾದನ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸವಳಂಗ ರಸ್ತೆಯ ಅಕ್ಕಮಹಾದೇವಿ ವೃತ್ತದ ಬಳಿ ನೂತನವಾಗಿ ನಿರ್ಮಿಸಿರುವ ಚಂದ್ರಗಿರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನೈಸರ್ಗಿಕ ವಿಜ್ಞಾನ ಮತ್ತು ಮಾನವ ವಿಜ್ಞಾನಗಳು ಸಂಪೂರ್ಣ ವ್ಯತಿರಿಕ್ತವಾಗಿವೆ. ಮಾನವ ಪೌರುಷದ ಮೂಲಕ ಎಲ್ಲವನ್ನೂ ತನ್ನ ನಿಯಂತ್ರಣ ಮತ್ತು ಹಿಡಿತದಲ್ಲಿ ಇಟ್ಟುಕೊಳ್ಳಬಹುದು ಎಂಬ ಭ್ರಮೆಯಲ್ಲಿ ಇದ್ದಾನೆ. ಬದುಕಲು ಅತ್ಯಗತ್ಯವಾದ ಆಹಾರ, ಗಾಳಿ, ನೀರು ಕಲುಷಿತಗೊಳ್ಳುತ್ತಿರುವ ಕಾರಣದ ಆರೋಗ್ಯ ಹದಗೆಡುತ್ತಿದೆ. ಪರಿಸರ ನಾಶ ಹೀಗೆ ಮುಂದುವರಿದರೆ ಆಮ್ಲಜನಕ ಕಿಟ್‌ ಧರಿಸಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರಕೃತಿ ಮುಂದೆ ಮಾನವ ಕ್ಷುಲಕ ಹುಳು ಎಂಬ ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ADVERTISEMENT

ಆಸ್ಪತ್ರೆ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಕೇವಲ ಹಣವಂತರಿಗಷ್ಟೇ ಸೀಮಿತವಾಗಬಾರದು. ಬಡವರಿಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆ ದೊರೆಯ
ಬೇಕು’ ಎಂದು ಕಿವಿಮಾತು ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಟಿಎಂಎಇಎಸ್ ಆಯುರ್ವೇದ ವಿದ್ಯಾಲಯದ ಆಡಳಿತಾಧಿಕಾರಿ ಜಿ.ಎ. ಹಿರೇಮಠ್, ನಿವೃತ್ತ ಎಂಜಿನಿಯರ್ ಬೆನಕಪ್ಪ, ಭದ್ರಾವತಿಯ ಬಿ.ಕೆ. ಮೋಹನ್, ಆಸ್ಪತ್ರೆಯ ಸಂಸ್ಥಾಪಕರಾದ ಡಾ.ಎಚ್‌.ಸಿ. ಗಿರೀಶ್, ಡಾ.ಎಚ್‌.ಸಿ. ಜಯಚಂದ್ರ ಇದ್ದರು.

ಸರೋಜಾ ಪ್ರಾರ್ಥಿಸಿದರು. ಡಾ.ಮಾಧುರ್ಯ ಸ್ವಾಗತಿಸಿದರು. ಚೈತ್ರಾ ಸಜ್ಜನ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.