ಶಿವಮೊಗ್ಗ: ಮೇ ತಿಂಗಳ ಮೂರನೇ ವಾರ ಪೂರ್ಣಗೊಳ್ಳುವ ಮುನ್ನವೇ ಮಲೆನಾಡಿನಲ್ಲಿ ವರುಣನಾರ್ಭಟ ಆರಂಭವಾಗಿದೆ. ಮೋಡ ಕವಿದ ವಾತಾವರಣ, ಬಿರುಸು ಮಳೆ, ಕೆಲ ಹೊತ್ತು ನೇಸರನ ಇಣುಕು ನೋಟ ಮುಂಗಾರು ಹೊತ್ತಿನ ಅನುಭವ ಆಗುತ್ತಿದೆ.
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸೊರಬ ತಾಲ್ಲೂಕಿನಲ್ಲಿ ಹೆಚ್ಚು ಮಳೆಸುರಿದಿದೆ. ಹವಾಮಾನ ಇಲಾಖೆಯ ವರುಣ ಮಿತ್ರನ ಮಾಹಿತಿಯಂತೆ ಸೊರಬ ತಾಲ್ಲೂಕಿನ ದೊಡ್ಡಿಕೊಪ್ಪದಲ್ಲಿ ಹೆಚ್ಚು ಮಳೆ (6.85 ಸೆಂ.ಮೀ) ಬಿದ್ದಿದೆ.
ಸೊರಬ ತಾಲ್ಲೂಕಿನ ಗುಡವಿಯಲ್ಲಿ 6.15 ಸೆಂ.ಮೀ, ಅಗಸನಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ 5.45 ಸೆಂ.ಮೀ ಹಾಗೂ ನ್ಯಾರ್ಸಿಯಲ್ಲಿ 4.8 ಸೆಂ.ಮೀ ಮಳೆ ಸುರಿದಿದೆ. ಹೊಸನಗರ ತಾಲ್ಲೂಕಿನ ಸುಳಗೋಡಿನಲ್ಲಿ 2.4 ಸೆಂ.ಮೀ ಹಾಗೂ ಭದ್ರಾವತಿ ತಾಲ್ಲೂಕಿನ ಡಿ.ಕಲ್ಲಹಳ್ಳಿಯಲ್ಲಿ 1.3 ಸೆಂ.ಮೀ ಮಳೆ ಬಿದ್ದಿದೆ.
ಬಿರುಸಿನ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಮಳೆ ಹಿನ್ನೆಲೆಯಲ್ಲಿ ಬುಧವಾರದಿಂದ (ಮೇ 21) ಆರಂಭವಾಗಬೇಕಿದ್ದ ಸಿಬಿಎಸ್ಇ ಪಠ್ಯಕ್ರಮದ ಶಾಲೆಗಳನ್ನು ಮೇ 23ಕ್ಕೆ ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.