ಭದ್ರಾವತಿ: ವರುಣನ ಆರ್ಭಟಕ್ಕೆ ಮನೆ, ಭತ್ತದ ತಾಕಿಗೆ ಸಾಕಷ್ಟು ಹಾನಿ ಉಂಟಾಗಿದ್ದು, ಶುಕ್ರವಾರ ಒಂದಿಷ್ಟು ಮಳೆ ಬಿಡುವು ಕೊಟ್ಟಿದ್ದರಿಂದ ತಹಶೀಲ್ದಾರ್ ಪ್ರದೀಪ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಲು ಸಾಧ್ಯವಾಗಿದೆ.
ನಗರಸಭಾ ವ್ಯಾಪ್ತಿಯಲ್ಲಿ 10 ಹಾಗೂ ಗ್ರಾಮೀಣ ಭಾಗದಲ್ಲಿ 14 ಮನೆಗಳಿಗೆ ಹಾನಿ ಉಂಟಾಗಿದ್ದು, ಅಗತ್ಯ ಇರುವ ಜನರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುವ ಕ್ರಮವನ್ನು ಸ್ಥಳೀಯ ಆಡಳಿತ ತೆಗೆದುಕೊಂಡಿದೆ.
ಗ್ರಾಮೀಣ ಭಾಗದ ದೊಣಬಘಟ್ಟ, ತಡಸ, ನಗರಸಭಾ ವ್ಯಾಪ್ತಿಯ ಉಜ್ಜಿನೀಪುರ, ಗುಂಡೂರಾವ್ ಶೆಡ್, ಹನುಮಂತಪ್ಪ ಶೆಡ್ ಸೇರಿ ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ಚಾವಣಿ ಕುಸಿದಿರುವ ಘಟನೆಗಳು ವರದಿಯಾಗಿವೆ. ಕೆರೆ ಭಾಗದಲ್ಲಿ ಇರುವ ಕೆಲವು ಗ್ರಾಮದ ಭತ್ತದ ತಾಕಿಗೆ ಹೆಚ್ಚಿನ ನೀರು ಹರಿದು ಬೆಳೆ ಮಲಗಿರುವ ದೃಶ್ಯ ಕವಲಗುಂದಿ, ದೊಣಬಘಟ್ಟ, ದೇವರ ನರಸೀಪುರ, ಅಂತರಗಂಗೆ, ಎರೇಹಳ್ಳಿ, ತಳ್ಳಿಕಟ್ಟೆ ಭಾಗದಲ್ಲಿ ಕಂಡುಬಂದಿದೆ. ಕೃಷಿ ಇಲಾಖೆ ಅಧಿಕಾರಿ ಶಶಿಧರ್, ಸಂದೀಪ್ ಸೇರಿ ಇನ್ನಿತರ ಅಧಿಕಾರಿಗಳ ತಂಡ ತಹಶೀಲ್ದಾರ್ ಪ್ರದೀಪ್, ಆರ್ಐ ಪ್ರಶಾಂತ್ ಅವರೊಂದಿಗೆ ಭತ್ತ ಹಾನಿ ತಾಕಿಗೆ ಭೇಟಿ ನೀಡಿ ಪರಿಶೀಲಿಸಿದರು. ಕೂಡ್ಲಿಗೆರೆ, ಕಸಬಾ ಭಾಗದ 75 ಎಕರೆ ಪ್ರದೇಶದಲ್ಲಿ ಭತ್ತದ ತಾಕಿಗೆ ಹಾನಿ ಉಂಟಾಗಿದ್ದು, ಮಳೆ ತಗ್ಗದಿದ್ದರೆ ಹಾನಿಯ ಪ್ರಮಾಣ ಹೆಚ್ಚುವ ಸಾಧ್ಯತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.