ಹೊಳೆಹೊನ್ನೂರು: ಇತ್ತೀಚೆಗೆ ಹೆಚ್ಚಿನ ಯುವಕರು ಮಾದಕ ವಸ್ತುಗಳಿಗೆ ದಾಸರಾಗಿ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭದ್ರಾವತಿ ತಾಲ್ಲೂಕು -2ರ ಯೋಜನಾಧಿಕಾರಿ ಅಜಯ್ ಕುಮಾರ್ ಹೇಳಿದರು.
ಪಟ್ಟಣ ಸಮೀಪದ ಕಲ್ಲಿಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕೈಮರ ವಲಯ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಮಾದಕ ವಸ್ತು ವಿರೋಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಇಂದಿನ ಯುವ ಜನತೆಯು ಮೋಜು, ಮಸ್ತಿ, ತಡರಾತ್ರಿಯ ಪಾರ್ಟಿ ಎಂದು ಜೀವನ ಶೈಲಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಇದರಿಂದ ಹದಿಹರೆಯದಲ್ಲಿ ಹಾದಿ ತಪ್ಪುವುದು ಸಾಮಾನ್ಯವಾಗಿದೆ. ಮಾದಕ ವ್ಯಸನದಿಂದ ರಕ್ಷಿಸಲು ಹಾಗೂ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ರತಿ ವರ್ಷ ಅಂತರರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಕಳ್ಳಸಾಗಣೆ ವಿರೋಧಿ ದಿನ ಆಚರಿಸಲಾಗುತ್ತಿದೆ’ ಎಂದರು.
ಭದ್ರಾವತಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪಿಎಚ್ಒ ಸುಶೀಲಾ ಬಾಯಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ‘ಜಿಲ್ಲಾ ಜನಜಾಗೃತಿ ವೇದಿಕೆ’ಯ ಉಪಾಧ್ಯಕ್ಷ ಯಡೇಹಳ್ಳಿ ಎಂ.ಪಾಲಾಕ್ಷಪ್ಪ ಉದ್ಘಾಟಿಸಿದರು.
ಸಿಆರ್ಪಿ ರಂಗನಾಥ್, ಪ್ರೌಢಶಾಲೆ ಮುಖ್ಯಶಿಕ್ಷಕ ಆರ್.ಸತೀಶ, ಮೇಲ್ವಿಚಾರಕ ಮಂಜುನಾಥ ತಾಲ್ಲೂಕು ಕೃಷಿ ಅಧಿಕಾರಿ ಆರ್.ಸುನೀಲ್, ಸೇವಾ ಪ್ರತಿನಿಧಿ ರಮ್ಯಾ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.