ಹೊಸನಗರ: ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಸರ್ಕಾರ ಸುಸ್ಥಿತಿಯಲ್ಲಿ ಸಾಗಲು ಸಾಧ್ಯ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಈಡಿಗರ ಸಭಾಭವನದಲ್ಲಿ ನಡೆದ ತಾಲ್ಲೂಕು ಮಟ್ಟದ ಸರ್ಕಾರಿ ನೌಕರರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಒಂದು ಅಂಗವೇ ಸರ್ಕಾರಿ ನೌಕರರು. ಅವರೆಲ್ಲರೂ ಅಭಿವೃದ್ಧಿ ಪರ ಚಿಂತನೆ ನಡೆಸಿ ಕೆಲಸ ಮಾಡಿದರೆ ಮಾತ್ರ ಸರ್ಕಾರದ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗುರುಭವನಕ್ಕೆ ಆಧ್ಯತೆ: ತಾಲ್ಲೂಕು ಶಿಕ್ಷಕರ ಸಂಘದ ಗುರುಭವನ ಕಟ್ಟಡವು ದುಸ್ಥಿತಿಯಲ್ಲಿದ್ದು, ಬೀಳುವ ಸ್ಥಿತಿಯಲ್ಲಿದೆ. ಇದರ ಪುನರ್ ನಿರ್ಮಾಣ ಕೆಲಸ ತುರ್ತಾಗಿ ಆಗಬೇಕಿದೆ. ಈ ಕುರಿತು ಶಿಕ್ಷಕರ ಸಂಘವು ಮನವಿ ಮಾಡಿದ್ದು ಮನವಿಯನ್ನು ಸರ್ಕಾರದ ಮುಂದಿಟ್ಟು ಅಗತ್ಯ ಅನುದಾನ ಮಂಜೂರು ಮಾಡಿಸಲು ಯತ್ನಿಸುತ್ತೇನೆ ಎಂದು ಬೇಳೂರು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾತನಾಡಿ, ಸರ್ಕಾರಿ ನೌಕರರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಬಗೆಹರಿಸಲು ಸಂಘ ಶಕ್ತಿಮೀರಿ ಕೆಲಸ ಮಾಡುತ್ತಿದೆ. ನೌಕರರ ವಿವಿಧ ಬೇಡಿಕೆಗಳು ಈಡೇರುವ ಎಲ್ಲಾ ನಿರೀಕ್ಷೆಗಳು ಇದೆ ಎಂದರು.
ಸಮ್ಮೇಳನದಲ್ಲಿ ಪ್ರಜಾಸ್ನೇಹಿ ಆಡಳಿತ ಕಾರ್ಯಗಾರ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ವಿಜೇತ ನೌಕರರಿಗೆ ಬಹುಮಾನ ವಿತರಣೆ ನಡೆಯಿತು. ನಂತರ ಸರ್ವ ಸದಸ್ಯರ ಮಹಾಸಭೆಯು ನಡೆಯಿತು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ಬಸವಣ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ತಹಸೀಲ್ದಾರ್ ರಶ್ಮಿ ಹಾಲೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್. ಕೃಷ್ಣಮೂರ್ತಿ, ಇಒ ನರೇಂದ್ರಕುಮಾರ್, ಶಿಕ್ಷಕರ ಸಂಘದ ಎಚ್.ಆರ್. ಸುರೇಶ್, ಅಕ್ಷರ ದಾಸೋಹ ಇಲಾಖೆ ನಿರ್ದೇಶಕ ನಾಗರಾಜ್, ಸಂಕೂರು ಹಾಲಪ್ಪ, ಗುರುಮೂರ್ತಿ, ಕೃಷ್ಣಮೂರ್ತಿ, ಪ್ರಭಾಕರ್, ಮಾಲತೇಶ್ ಇದ್ದರು.
ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಸ್ವಾಗತಿಸಿದರು. ಶಿಕ್ಷಕರಾದ ರೇಖಾ ಪ್ರಭಾಕರ್ ಮತ್ತು ಪ್ರದೀಪ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.