ಹೊಸನಗರ: ‘ಜಿಲ್ಲೆ ಅಭಿವೃದ್ಧಿ ಕಂಡಿರುವುದು ಸಂಸದ ಬಿ.ವೈ.ರಾಘವೇಂದ್ರ ಅವರ ಕಾಲದಲ್ಲಿ. ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಆಮೂಲಾಗ್ರವಾಗಿ ಅಭಿವೃದ್ಧಿ ಸಾಧಿಸಲಾಗಿದೆ’ ಎಂದು ಬಿಜೆಪಿ ಮುಖಂಡ ವೀರೇಶ ಆಲುವಳ್ಳಿ ಹೇಳಿದರು.
‘ಸಂಸದ ಬಿ.ವೈ. ರಾಘವೇಂದ್ರ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಜನಮಾನಸದಲ್ಲಿ ಅಚ್ಚೊತ್ತಿವೆ. ಆದರೂ ಕಾಂಗ್ರೆಸ್ ಮುಖಂಡರು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಬಿಜೆಪಿಗೆ ನೈತಿಕತೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದು ಬಾಲಿಶವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
‘ಗ್ಯಾರಂಟಿ ಯೋಜನೆಗಳು ಕೆಲಸಮಾಡುತ್ತಿಲ್ಲ. ರಾಜ್ಯದ ಜನತೆ ಗ್ಯಾರಂಟಿಗಳ ಬಗ್ಗೆ ಅಪಸ್ವರ ಎತ್ತಿದ್ದಾರೆ. ನಟಿ ಶಿವರಾಜಕುಮಾರ್ ಬಗ್ಗೆ ಗೌರವವಿದೆ. ಆದರೆ ಕ್ಷೇತ್ರದಲ್ಲಿ ಅವರ ಹೋರಾಟ ನಡೆಯೋದಿಲ್ಲ. ಕೇವಲ ‘ಪಿಕ್ನಿಕ್’ ಮಾಡಿವುದಕ್ಕೆ ಸರಿ’ ಎಂದು ಲೇವಡಿ ಮಾಡಿದರು.
ಈಡಿಗರು ಬಿಜೆಪಿ ಪರ:
ಯುವ ಮುಖಂಡ ಸುರೇಶ್ ಸ್ವಾಮಿ ರಾವ್ ಮಾತನಾಡಿ, ‘ಜಿಲ್ಲೆಯಲ್ಲಿ ಈಡಿಗ ಸಮುದಾಯ ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ನಿಂತಿದೆ. ಕಾಂಗ್ರೆಸ್ ಎಷ್ಟೇ ದುಂಬಾಲು ಬಿದ್ದರೂ ಈಡಿಗ ಮತಗಳು ಕಾಂಗ್ರೆಸ್ ಕಡೆ ಹೋಗುವುದಿಲ್ಲ. ಈಡಿಗ ಸಮಾಜದವರು ದಡ್ಡರಲ್ಲ. ಅವರಿಗೆ ಯಾರು ನಿಜವಾಗಿ ಸಮಾಜದ ಪರ ಕೆಲಸ ಮಾಡಿದ್ದಾರೆ. ಯಾರು ಸಮಾಜದ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ ಎಂಬುದನ್ನು ತಿಳಿದಿದ್ದಾರೆ ಎಂದರು.
‘ಈಡಿಗರು ಸಮಾಜದ ಅಭಿವೃದ್ಧಿಗೆ ಸಹಕರಿಸಿದ ಬಿಜೆಪಿಯ ಪರವಾಗಿ ಮತ ಚಲಾಯಿಸಲಿದ್ದಾರೆ. ಕಾಂಗ್ರೆಸ್ನವರು ಕೇವಲ ಕಥೆ ಕಟ್ಟುತ್ತಿದ್ದಾರೆ. ಅವರ ಸುಳ್ಳು ಕಥೆಯಲ್ಲಿ ಹುರುಳಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಯಾರು, ಏನು, ಈಗೇಕೆ ಬಂದಿದ್ದಾರೆ ಎಂಬುದು ಗೊತ್ತಿದೆ. ಜಾತಿ ವಿಚಾರದಲ್ಲಿ ಮತ ಸೆಳೆಯಲು ಸಾಧ್ಯವಿಲ್ಲ’ ಎಂದರು.
ಈಡಿಗ ಸಮಾಜದ ಶ್ರೇಯೋಭಿವೃದ್ಧಿಗೆ ಕಾಂಗ್ರೆಸ್ ನಾಯಕರು ನಯಾಪೈಸೆ ಕೆಲಸ ಮಾಡಿಲ್ಲ. ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಅವರಿಂದ ಸಮಾಜಕ್ಕೆ ಯಾವುದೆ ಸಹಕಾರ, ಅನುದಾನ ಬಂದಿಲ್ಲ. ಆದರೆ ಬಿ.ಎಸ್. ಯಡಿಯೂರಪ್ಪ ಕರೆದು ಒಂದು ಎಕರೆ ಜಾಗ ನೀಡಿದ್ದಾರೆ. ಎಲ್ಲೆಡೆ ಅನುದಾನ ನೀಡಿದ್ದಾರೆ. ಹಾಗಾಗಿ ಈಡಿಗ ಸಮಾಜ ಬಿಜೆಪಿ ಪರವಾಗಿ ನಿಂತಿದೆ ಎಂದು ತಿಳಿಸಿದುರ.
ತಾಲ್ಲೂಕಿನಲ್ಲಿ ಉದ್ಘಾಟನೆ ಆದ ಕಾಮಗಾರಿಗಳನ್ನು ಮತ್ತೆ ಉದ್ಘಾಟನೆ ಮಾಡುವ ಕೆಲಸ ನಡೆಯುತ್ತಿದೆ. ಇದು ತೀರಾ ಹಾಸ್ಯಾಸ್ಪದ ಎಂದರು.
ತಾಲ್ಲೂಕು ಮಂಡಲ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಪಕ್ಷದ ಪ್ರಮುಖರಾದ ನಿತಿನ್ ನಗರ, ಮಂಡಾನಿ ರಮೇಶ್, ಕಾಲಸಸಿ ಸತೀಶ್, ಬಿ.ಯುವರಾಜ್, ಪ್ರಹ್ಲಾದ್ ಜಯನಗರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.