ಭದ್ರಾವತಿ: ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಮೂಲಕ ಪ್ರತಿಭೆ ಪ್ರದರ್ಶಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಾಧನೆ ಮಾಡಿರುವ ಮೂರು ವಯಸ್ಸಿನ ಪ್ರತೀಕ್ಷಾ ಈಗ ಎಲ್ಲರ ಮನೆ ಮಾತಾಗಿದ್ದಾಳೆ.
ಅಂತರಗಂಗೆ ಸಮೀಪದ ಉಕ್ಕುಂದ ಗ್ರಾಮದ ಕೂಲಿ ಕೆಲಸ ಮಾಡುವ ಪ್ರದೀಪಕುಮಾರ್, ಸಿಂಧು ದಂಪತಿಯ ಮಗಳಾದ ಪ್ರತೀಕ್ಷಾ ಅರಳು ಹುರಿದಂತೆ ಪಟಪಟನೆ ಮಾತನಾಡುವ ಜೊತೆಗೆ ಸ್ಥಳೀಯ ಶಾಸಕರಿಂದ ಹಿಡಿದು ರಾಜ್ಯ, ರಾಷ್ಟ್ರ, ಧ್ವಜ, ವಾಹನ... ಹೀಗೆ ಹಲವು ವಿಷಯಗಳ ಕುರಿತು ಪ್ರಶ್ನಿಸುತ್ತ ಹೋದಂತೆ ಉತ್ತರದ ಸುರಿಮಳೆ ಸುರಿಸುತ್ತಾಳೆ. ಇವಳ ಮುಡಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಕಿರೀಟದ ಗರಿ ಸಿಕ್ಕಿದೆ.
‘ಸದಾ ಟಿ.ವಿ. ನೋಡುವ ನನ್ನ ಮಗಳು ಅಲ್ಲಿ ಬರುವ ವಿಷಯವನ್ನು ಮತ್ತೆ ಮತ್ತೆ ಹೇಳುವ ಕಲೆ ರೂಢಿ ಮಾಡಿಕೊಂಡಿದ್ದಾಳೆ. ಇದಕ್ಕೆ ತಕ್ಕಂತೆ ನಾವು ಕಲಿಸಿದ ಎಲ್ಲ ಸಂಗತಿಯನ್ನು ಪುನರುಚ್ಚರಿಸುವ ಈಕೆ ಹೇಳಿಕೊಟ್ಟ ಸಂಗತಿ ಮರೆಯದೇ ಪುನಃ ಹೇಳುತ್ತಾಳೆ. ಇದನ್ನು ಗುರುತಿಸಿದ ನನ್ನ ತಂಗಿ ಈ ಪ್ರಶಸ್ತಿ ನನ್ನ ಮಗಳಿಗೆ ಸಿಗಲು ನೆರವಾದಳು’ ಎಂದು ತಂದೆ ಪ್ರದೀಪಕುಮಾರ್ ‘ಪ್ರಜಾವಾಣಿ’ ಹೇಳಿದರು.
ಅಂಚೆ ಮೂಲಕ ಬಂದ ಈ ಗೌರವ ಪ್ರಶಸ್ತಿಯನ್ನು ಶಾಸಕ ಬಿ.ಕೆ. ಸಂಗಮೇಶ್ವರ ಗೃಹ ಕಚೇರಿಯಲ್ಲಿ ಪ್ರತೀಕ್ಷಾಗೆ ಪ್ರದಾನ ಮಾಡಿ, ‘ಈ ಮಗುವಿನ ಪ್ರತಿಭೆ ಅಪಾರವಾಗಿದೆ. ಈಕೆಗೆ ಹೇಳಿಕೊಟ್ಟ ವಿಷಯವನ್ನು ಮತ್ತೆ ಪ್ರಶ್ನಿಸಿದರೆ ಪುನಃ ಉತ್ತರಿಸುವ ಜ್ಞಾನ ಸಂಪತ್ತು ಹೊಂದಿದ್ದಾಳೆ’ ಎಂದು ಪ್ರಶಂಸಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.