ADVERTISEMENT

ಭೂಪಟದಲ್ಲಿ ಭಾರತಕ್ಕೆ ಎತ್ತರದ ಸ್ಥಾನ

ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:05 IST
Last Updated 8 ಮೇ 2022, 4:05 IST
ಶಿವಮೊಗ್ಗ ಪೆಸಿಟ್ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರಿಂಗ್ ಮತ್ತು ಎಂಬಿಎ 12ನೇ ಪದವೀಧರರ ದಿನಾಚರಣೆಯನ್ನು ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.
ಶಿವಮೊಗ್ಗ ಪೆಸಿಟ್ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರಿಂಗ್ ಮತ್ತು ಎಂಬಿಎ 12ನೇ ಪದವೀಧರರ ದಿನಾಚರಣೆಯನ್ನು ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಉದ್ಘಾಟಿಸಿದರು.   

ಶಿವಮೊಗ್ಗ: ಮುಂದಿನ 25 ವರ್ಷಗಳಲ್ಲಿ ದೇಶದ ಆರ್ಥಿಕತೆಯೇ ಬದಲಾಗಿ ವಿಶ್ವದ ಭೂಪಟದಲ್ಲಿ ಭಾರತಕ್ಕೆ ಎತ್ತರದ ಸ್ಥಾನ ಸಿಗಲಿದೆ ಎಂದು ಬೆಂಗಳೂರಿನ ಎಕ್ಸೆಲ್ ಸಂಸ್ಥೆಯ ಸಂಸ್ಥಾಪಕ ಪಾಲುದಾರ ಪ್ರಶಾಂತ್ ಪ್ರಕಾಶ್ ಹೇಳಿದರು.

ಶಿವಮೊಗ್ಗದ ಪೆಸಿಟ್ ಕಾಲೇಜ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂಜಿನಿಯರಿಂಗ್ ಮತ್ತು ಎಂಬಿಎ 12ನೇ ಪದವೀಧರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಡಿಜಿಟಲ್ ಮೀಡಿಯಾ ದೇಶದಲ್ಲಿ ಆರ್ಥಿಕತೆಯನ್ನೇ ಬದಲಾಯಿಸುತ್ತಿದ್ದು, ಮುಂದಿನ 25 ವರ್ಷಗಳಲ್ಲಿ ರಾಷ್ಟ್ರವು ಕಳೆದ 75 ವರ್ಷಗಳಲ್ಲಿ ಸಾಧಿಸಲು ಆಗದೇ ಇರುವ ಕೆಲಸಗಳನ್ನು ಸಾಧ್ಯವಾಗಿಸಲಿದೆ ಎಂದು ತಿಳಿಸಿದರು.

ADVERTISEMENT

ಡಿಜಿಟಲ್ ಮೀಡಿಯಾದಲ್ಲಿ ಸ್ಟಾರ್ಟ್ ಅಪ್‌ಗಳಿಗೆ ವಿಫುಲ ಅವಕಾಶವಿದೆ. ಲಿಂಕ್ಡ್ ಇನ್, ಫೋರ್ಡ್ ಕಾಸ್ಟ್ ವೆಬಿನಿಯರ್‌ಗಳು ಉದ್ಯೋಗವನ್ನು ಕಲ್ಪಿಸುತ್ತಿವೆ. ಅವುಗಳನ್ನು ಸದುಪಯೋಗಗೊಳಿಸುವ ಬಗ್ಗೆ ಗೊತ್ತಿದ್ದರೆ ಸಾಕು ಎಂದರು.

ಮುಂದಿನ 10 ವರ್ಷಗಳಲ್ಲಿ ಅಂತರ್ಜಾಲ ಮತ್ತು ತಂತ್ರಾಂಶಗಳು ಉತ್ತಮ ಉದ್ಯೋಗ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ದೇಶದ ಯುವಜನರಿಗೆ ಆಶಾಕಿರಣವಾಗಲಿದೆ ಎಂದು ಹೇಳಿದರು.

ಸಂಸ್ಥೆಯ ಟ್ರಸ್ಟಿ ಮತ್ತು ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ‘ಪದವಿ ಪಡೆದ ನಂತರ ಯಾವ ದಾರಿಯಲ್ಲಿ ಹೋಗಬೇಕೆಂಬುದನ್ನು ಮೊದಲೇ ನಿರ್ಧಾರ ಮಾಡಬೇಕು. ಯಾವುದೇ ಕ್ಷೇತ್ರದಲ್ಲಿ ಸಫಲವಾಗಬೇಕಾದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಿಇಎಸ್ ಟ್ರಸ್ಟ್‌ನ ಸಿಸಿಎ ಡಾ.ಆರ್. ನಾಗರಾಜ್, ಪ್ರಾಂಶುಪಾಲ ಡಾ.ಎಂ.ವಿ. ಚೈತನ್ಯಕುಮಾರ್, ಪಿಇಎಸ್ ಟ್ರಸ್ಟಿ ಎಸ್.ವೈ. ಉಮಾದೇವಿ, ಅಶ್ವಿನಿ ರಾಘವೇಂದ್ರ, ಸುಭಾಷ್, ಆದಿತ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.