ಶಿವಮೊಗ್ಗ: ಮೂರನೇ ಅಲೆಯ ಕೊರೊನಾ ವೈರಸ್ ದುರ್ಬಲವಾಗಿದೆ. ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ ಪ್ರತಿಪಾದಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ಕುರಿತು ನಡೆದ ತಜ್ಞವೈದ್ಯರ ಸಮಿತಿ ಸಭೆಯ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಬಹುತೇಕ ಮಕ್ಕಳಲ್ಲಿ ಕೋವಿಡ್ ಪ್ರತಿಕಾಯ ಸೃಷ್ಟಿಯಾಗಿದೆ. ಮಕ್ಕಳಲ್ಲಿ ತೀವ್ರ ಸೋಂಕು ಕಾಣಿಸಿಕೊಂಡಿಲ್ಲ. ಮಕ್ಕಳಲ್ಲಿ ಕೋವಿಡ್ ವೈರಸ್ ಸೋಂಕು ಉಲ್ಬಣಗೊಳ್ಳುವ ಸಾಧ್ಯತೆ ಕಡಿಮೆ. ಅವರ ಮೂಲಕ ಹರಡುವ ದುರ್ಬಲ ಕೋವಿಡ್ ವೈರಸ್ನಿಂದ ಸಾಮುದಾಯಿಕ ಪ್ರತಿರೋಧಶಕ್ತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.
ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಮಕ್ಕಳಲ್ಲೂ ಸಾಮಾನ್ಯ ಜ್ವರ, ನೆಗಡಿ, ಕೆಮ್ಮುಕಾಣಿಸಿಕೊಳ್ಳುತ್ತಿದೆ. ಎರಡು ಮೂರು ದಿನಗಳ ಬಳಿಕ ಆರೋಗ್ಯ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ವೈರಲ್ ಜ್ವರ ಮೊದಲೆರಡು ದಿನ ಜಾಸ್ತಿಯಾಗಿರುತ್ತದೆ. ನಂತರದ ದಿನಗಳಲ್ಲಿ ಕಡಿಮೆಯಾಗುತ್ತದೆ. ಮಗುವಿನ ದೈನಂದಿನ ಚಟುವಟಿಕೆಯಲ್ಲಿ ಏನಾದರೂ ತುಂಬಾ ವ್ಯತ್ಯಾಸ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಸಾಮಾನ್ಯ ಜ್ವರಕ್ಕೆ ನೀಡುವ ಔಷಧವನ್ನೇ ಅಂತಹ ಮಕ್ಕಳಿಗೂ ನೀಡಲಾಗುತ್ತದೆ. ಅನಾರೋಗ್ಯಕ್ಕೆ ಒಳಗಾಗುವ ಎಲ್ಲಾ ಮಕ್ಕಳಿಗೆ ಕೋವಿಡ್ ಪರೀಕ್ಷೆ ನಡೆಸುವ ಅಗತ್ಯವಿಲ್ಲ. ಹೃದಯ ಕಾಯಿಲೆ, ಕ್ಯಾನ್ಸರ್, ಮಧುಮೇಹಗಳಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳು ಎಚ್ಚರಿಕೆ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕೋವಿಡ್ ತಜ್ಞರ ಸಮಿತಿ ಸದಸ್ಯ ಡಾ.ಶ್ರೀಕಾಂತ್ ಹೆಗ್ಡೆ ಮಾತನಾಡಿ, ಮೂರನೇ ಅಲೆಯಲ್ಲಿ ದೊಡ್ಡವರಲ್ಲಿಯೂ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. ಈಗಾಗಲೇ ಇನ್ನಿತರ ರೋಗಗಳಿಂದ ಬಳಲುತ್ತಿರುವವರು ಒಂದಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಇದುವರೆಗೆ ಒಂದು ಲಸಿಕೆ ಹಾಕಿಸಿಕೊಳ್ಳುವ ಸೋಂಕಿನ ಪ್ರಮಾಣ ಹೆಚ್ಚಾಗಿ ಕಂಡುಬರುತ್ತಿದೆ. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್ ಹಿಮ್ಮೆಟ್ಟಿಸಬಹುದು’ ಎಂದರು.
ಶಾಲೆಗಳನ್ನು ಮುಚ್ಚದೇ ನಿರಂತರವಾಗಿ ನಡೆಸಬೇಕು. ಪೋಷಕರು ಆತಂಕಕ್ಕೆ ಒಳಗಾಗದೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು. ಈಗಾಗಲೇ ಕೋವಿಡ್ನಿಂದಾಗಿ ಶಾಲೆಗಳು ವರ್ಷದವರೆಗೆ ತೆರೆಯದೆ ಮಕ್ಕಳ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಹಲವು ಸಾಮಾಜಿಕ ಸಮಸ್ಯೆಗಳು ಎದುರಾಗುತ್ತಿವೆ. ಅಗತ್ಯವಿದ್ದರೆ ಕೋವಿಡ್ ಸೋಂಕು ಹೆಚ್ಚು ಕಾಣಿಸಿಕೊಳ್ಳುವ ತರಗತಿಗಳಿಗೆ ರಜೆ ನೀಡಬಹುದು ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ.ಮಂಜುನಾಥ ಸ್ವಾಮಿ, ಡಾ.ಪ್ರಿಯಂವಧ, ಡಾ.ಶಂಭುಲಿಂಗ ಡಾ.ಪಾಟೀಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.