ಶಿಕಾರಿಪುರ: ಹಾಲುಮತ ಕುಲಗುರುಗಳಾದ ರೇವಣಸಿದ್ದೇಶ್ವರರು ಸಿದ್ಧ ಪರಂಪರೆಗೆ ವಿಶೇಷ ಶಕ್ತಿ ನೀಡಿದ್ದಾರೆ ಎಂದು ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಸ್ವಾಮೀಜಿ ಶ್ಲಾಘಿಸಿದರು.
ಪಟ್ಟಣದ ದೊಡ್ಡಕೇರಿಯಲ್ಲಿ ಶುಕ್ರವಾರ ಗುರು ರೇವಣಸಿದ್ದೇಶ್ವರ ಹಾಲುಮತ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ನಂತರ ನಡೆದ ಧರ್ಮಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
‘ರೇವಣಸಿದ್ದೇಶ್ವರರು ಹಲವು ಶರಣರಿಗೆ ಧೀಕ್ಷೆ ಅನುಗ್ರಹಿಸಿದ್ದಾರೆ. ಅವರು ಹಾಲುಮತ ಸಮಾಜದ ಧಾರ್ಮಿಕ ವಿಧಿ– ವಿಧಾನಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಾಲುಮತ ಸಮಾಜದವರು ಹೆಚ್ಚು ಸಂಘಟಿತರಾಗಬೇಕು. ಸಮಾಜದ ಭಾಂದವರ ಮಧ್ಯೆ ಯಾವುದೇ ತಾರತಮ್ಯ ಇಲ್ಲದೇ ಹೊಂದಾಣಿಕೆ ಇರಬೇಕು’ ಎಂದು ಹೇಳಿದರು.
‘ಹಾಲುಮತ ಸಮಾಜದಲ್ಲಿ ಮೇಲು ಕೀಳು ವರ್ಗಗಳಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಒಂದೇ ಹಾಲುಮತ ಸಮಾಜವಿದೆ. ಕುರುಬ ಸನಾಜದ ತಾಲ್ಲೂಕು ಅಧ್ಯಕ್ಷರಾದ ಕಬಾಡಿ ರಾಜಣ್ಣ ಅವರು ಸಮಾಜದ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ರೇವಣಸಿದ್ದೇಶ್ವರ ಹಾಲುಮತ ದೈವ ಬಳಗದ ಅಧ್ಯಕ್ಷ ಮುಗಳಗೇರಿ ಮಹೇಶಪ್ಪ ಅಧ್ಯಕ್ಷತೆ ವಹಿಸಿದ್ದರು.
ಕುರುಬ ಸಮಾಜದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ನಗರದ ಮಹಾದೇವಪ್ಪ, ಅಧ್ಯಕ್ಷ ಕಬಾಡಿ ರಾಜಣ್ಣ, ಉಪಾಧ್ಯಕ್ಷ ಗೋಣಿಮಾಲತೇಶ್, ಪುರಸಭೆ ಸದಸ್ಯರಾದ ಜೀನಳ್ಳಿ ಪ್ರಶಾಂತ್, ಜಯಶ್ರೀ, ರೇವಣಸಿದ್ದೇಶ್ವರ ಹಾಲುಮತ ದೈವ ಬಳಗದ ಉಪಾಧ್ಯಕ್ಷ ಬಂತೇರ್ ದಶರಥಪ್ಪ, ಕಾರ್ಯದರ್ಶಿ ಮಾಯಪ್ಪರ ಕುಬೇಂದ್ರಪ್ಪ, ಮಹಾದ್ವಾರ ನಿರ್ಮಾಣ ಸಮಿತಿ ಗೌರವಾಧ್ಯಕ್ಷ ಜೀನಳ್ಳಿ ಹಳದಪ್ಪ, ಅಧ್ಯಕ್ಷ ಮೊಟ್ಟೇರ್ ಗಿಡ್ಡಪ್ಪ, ಉಪಾಧ್ಯಕ್ಷ ಚಂದ್ರುಚೂರಿ, ಕಾರ್ಯದರ್ಶಿ ರತೀಶ್ ಕಟ್ಟಿಗಿ, ಸಹ ಕಾರ್ಯದರ್ಶಿ ಹರೀಶ್, ಸಂಜೀವ್ ಖಜಾಂಚಿ ಬಂತೇರ್ ಚೇತನ್, ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.