ADVERTISEMENT

‘ಅಪ್ಪು’ಗೆ ಕಲಾ ವಿದಾಯ ಸಲ್ಲಿಸಿದ ಜಗದೀಶ್

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 7:12 IST
Last Updated 2 ನವೆಂಬರ್ 2021, 7:12 IST
ತೀರ್ಥಹಳ್ಳಿ ತಾಲ್ಲೂಕಿನ ಕುರುವಳ್ಳಿಯ ಜಗದೀಶ್ ಮಣ್ಣಿನಲ್ಲಿ ಅಪ್ಪುವಿನ ಮೂರ್ತಿ ಮಾಡಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಕುರುವಳ್ಳಿಯ ಜಗದೀಶ್ ಮಣ್ಣಿನಲ್ಲಿ ಅಪ್ಪುವಿನ ಮೂರ್ತಿ ಮಾಡಿರುವುದು   

ತೀರ್ಥಹಳ್ಳಿ: ಅಗಲಿದ ನೆಚ್ಚಿನ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ದೇಶದಾದ್ಯಂತ ಅಭಿಮಾನಿಗಳು ವಿಭಿನ್ನವಾಗಿ ಅಂತಿಮ ‌ನಮನ ಸಲ್ಲಿಸುತ್ತಿದ್ದಾರೆ. ತೀರ್ಥಹಳ್ಳಿಯ ಶಿಲ್ಪಿಯೊಬ್ಬರು ಮಣ್ಣಿನಿಂದ ಪುನೀತ್ ಅವರ ಮೂರ್ತಿ ಮಾಡಿ, ಅಂತಿಮ ನಮನ ಸಲ್ಲಿಸಿದ್ದಾರೆ.

ತಾಲ್ಲೂಕಿನ ಕುರುವಳ್ಳಿ ಜಗದೀಶ್ ಮಣ್ಣಿನಲ್ಲಿ ಅಪ್ಪುವಿನ ಮೂರ್ತಿ ಮಾಡಿದ ಕಲಾವಿದ. ಇಲ್ಲಿನ ‘ಶಿಲ್ಪಕಲಾ ಸಂಗಮ’ದಲ್ಲಿ ವಿಗ್ರಹಗಳನ್ನು ಕೆತ್ತುವ ಅವರು, ತಂದೆ ಬಾಲಕೃಷ್ಣ, ತಾಯಿ ರಾಣಿದೇವಿ ಅವರಿಂದ ಬಾಲ್ಯದಿಂದಲೇ ಮೂರ್ತಿಗಳನ್ನು ಮಾಡುವ ಕಲೆಯನ್ನು ಬೆಳೆಸಿಕೊಂಡಿದ್ದರು. ಬಿಡದಿಯಲ್ಲಿ ಇರುವ ಕೆ.ಪಿ.ಜೆ ಪ್ರಭು ಕರಕುಶಲ ಸಂಸ್ಥೆ ಜೋಗರದೊಡ್ಡಿಯಲ್ಲಿ ಶಿಲ್ಪಕಲೆಯ ಬಗ್ಗೆ ತರಬೇತಿ ಪಡೆದಿದ್ದಾರೆ.

ಪುನೀತ್ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆ ಅಭಿಮಾನಿಗಳು ಸಾಗರೋಪಾದಿಯಲ್ಲಿ ನಮನ ಸಲ್ಲಿಸಿದ್ದಾರೆ. ಜಗದೀಶ್‌ಗೆ ತಮ್ಮ ನೆಚ್ಚಿನ ನಟನಿಗೆ ವಿಶಿಷ್ಟವಾಗಿ ನಮನ ಸಲ್ಲಿಸುವ ಇರಾದೆ ಇತ್ತು. ಆ ಇಚ್ಛೆ ಮಣ್ಣಿನಿಂದ ಅಪ್ಪು ಮೂರ್ತಿ ಮಾಡಲು ಪ್ರೇರಣೆಯಾಯಿತು.

ADVERTISEMENT

ಬಾಲ್ಯದಿಂದಲೇ ಪುನೀತ್ ರಾಜ್‌ಕುಮಾರ್ ಸಿನಿಮಾ ನೋಡಿಕೊಂಡು ಬಂದಿದ್ದ ಜಗದೀಶ್ ಪುನೀತ್ ಅಭಿನಯದ ಸಿನಿಮಾ ಬಂದಾಗ ಟ್ಯಾಕೀಸ್‌ನಲ್ಲಿಯೇ ನೋಡುವ ಅಪ್ಪಟ ಅಭಿಮಾನಿ.

‘ನಟ ಪುನೀತ್ ರಾಜ್‍ಕುಮಾರ್ ಅವರ ನಿಧನ ನಂಬಲು ಅಸಾಧ್ಯ. ಇನ್ನು ಹೆಚ್ಚು ಸಿನಿಮಾಗಳು ಅವರಿಂದ ಬರಬೇಕಾಗಿತ್ತು. ಅವರು ಇಲ್ಲ ಎಂದು ನಾನು ಭಾವಿಸುವುದಿಲ್ಲ. ಅವರು ಕನ್ನಡಿಗರ ಹೃದಯದಲ್ಲಿ ಜೀವಂತವಾಗಿ ಇರುತ್ತಾರೆ. ಅವರ ವ್ಯಕ್ತಿತ್ವ ಎಲ್ಲರನ್ನು ಆಕರ್ಷಿಸುವಂತದ್ದು’ ಎನ್ನುತ್ತಾರೆ ಶಿಲ್ಪ ಕಲಾವಿದ ಜಗದೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.