ADVERTISEMENT

ಜಗಜೀವನ್‌ ರಾಂ ಧ್ಯೇಯವೇ ಸಮಸಮಾಜ ನಿರ್ಮಾಣ

114ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ.ಮೈಲಹಳ್ಳಿ ರೇವಣ್ಣ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 10:09 IST
Last Updated 5 ಏಪ್ರಿಲ್ 2021, 10:09 IST
ಶಿವಮೊಗ್ಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ್‌ ರಾಂ ಅವರ ಜನ್ಮದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಗಜೀವನ್‌ ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಶಿವಮೊಗ್ಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ್‌ ರಾಂ ಅವರ ಜನ್ಮದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಜಗಜೀವನ್‌ ರಾಂ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.   

ಶಿವಮೊಗ್ಗ: ಅಂಬೇಡ್ಕರ್, ಡಾ.ಬಾಬು ಜಗಜೀವನ ರಾಂ ಅವರ ವಿಚಾರಧಾರೆಗಳು ಭಿನ್ನವಾದರೂ, ಸಮಸಮಾಜ ನಿರ್ಮಾಣ, ಅಸ್ಪೃಶ್ಯತೆಯ ನಿವಾರಣೆ ಇಬ್ಬರ ಮುಖ್ಯ ಧ್ಯೇಯವಾಗಿತ್ತು ಎಂದು ಡಾ.ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ವಿಶ್ರಾಂತ ಪ್ರಾಧ್ಯಾಪಕ ಡಾ.ಮೈಲಹಳ್ಳಿ ರೇವಣ್ಣ ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರ ಪಾಲಿಕೆ ದಲಿತ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನ ರಾಂ ಅವರ 114ನೇ ಜನ್ಮದಿನೋತ್ಸವ ಕಾರ್ಉಕ್ರಮದಲ್ಲಿ ಅವರು ಮಾತನಾಡಿದರು.

ಜಗಜೀವನ ರಾಂ ಅವರು ದೂರದೃಷ್ಟಿಯ ರಾಜಕಾರಣಿ, ದಲಿತ ಸಮುದಾಯದ ಸಂತ, ಸಮಾಜ ಸುಧಾರಕ, ಅಂಬೇಡ್ಕರ್ ಹಾಗೂ ಅವರ ವಿಚರಗಳಲ್ಲಿ ಸಾಮ್ಯತೆ ಕಾಣಬಹುದು. ಬೇರೆಬೇರೆ ದಾರಿಗಳ ಮೂಲಕ ಚಿಂತನೆಗಳನ್ನು ಸಮಾಜಕ್ಕೆ ನೀಡಿದರು. ಬಾಬುಜಿ ಅವರ ಜನ್ಮದಿನ ದಲಿತ ಸಮುದಾಯಕ್ಕೆ ಒಂದು ವಿಶೇಷ ಹಬ್ಬ. ಅವರು ದಲಿತರ ಸ್ವಾಭಿಮಾನದ ಸಂಕೇತ ಎಂದು ಬಣ್ಣಿಸಿದರು.

ADVERTISEMENT

ಜಗಜೀವನ ರಾಂ ರಾಜಕಾರಣಿಗಿಂತ ಹೆಚ್ಚಾಗಿ ಸಮಾಜ ಸುಧಾರಕರಾಗಿದ್ದರು. ಕಾರ್ಮಿಕ, ಸಾರಿಗೆ, ಕೃಷಿ, ರೈಲ್ವೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಸಚಿವರಾಗಿ ಕೆಲಸ ಮಾಡಿದ್ದರು. ಉಪ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ತಳ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಜನಪರ ಕಾಯ್ದೆಗಳನ್ನು ಜಾರಿಗೆ ತಂದಿದ್ದರು. ಅವರ ಬಾಲ್ಯದ ಬದುಕು ಕಷ್ಟದಲ್ಲಿ ಸಾಗಿತ್ತು. ದಲಿತ ಕುಟುಂಬದಲ್ಲಿ ಜನಿಸಿದ ಕಾರಣಕ್ಕೆ ಹಲವು ಅವಮಾನಗಳನ್ನು ಅನುಭವಿಸಿದರು. ದೂರದೃಷ್ಟಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದರು. ರಾಜಕಾರಣಕ್ಕೆ ಸ್ಫೂರ್ತಿಯಾಗಿದ್ದರು. ಅವರ ಕೃಷಿಕ್ರಾಂತಿ ಕಲ್ಪನೆ ಅದ್ವಿತೀಯ ಎಂದರು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸರ್ಕಾರ ಜಾರಿಗೆ ತರುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಜಗಜೀವನರಾಂ ರಾಷ್ಟ್ರಭಕ್ತರಾಗಿದ್ದರು. ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದರೂ ಅವಕಾಶ ದೊರೆಯಲಿಲ್ಲ. ಪ್ರತಿಭಾವಂತ ರಾಜಕಾರಣಿಯಾಗಿ ಅಭಿವೃದ್ಧಿಗೆ ಶ್ರಮಿಸಿದರು. ಅಬವರ ಆದರ್ಶಗಳು ಇಂದಿನ ರಾಜಕಾರಣಿಗಳಿಗೆ ಮಾರ್ಗದರ್ಶ ನೀಡುತ್ತವೆ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಎಎಸ್‌ಪಿ ಡಾ.ಶೇಖರ್, ರಂಗಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.