ADVERTISEMENT

ಕನ್ನಡದಲ್ಲಿ ವಚನ ಸಾಹಿತ್ಯಕ್ಕೆ ಅಗ್ರ ಸ್ಥಾನ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 2:46 IST
Last Updated 23 ಫೆಬ್ರುವರಿ 2022, 2:46 IST
ಆನಂದಪುರ ಸಮೀಪದ ಮುರುಘಾಮಠದಲ್ಲಿ ನಡೆಯುತ್ತಿರುವ ತಾಳೆಗರಿಗಳ ಡಿಜಿಟಲೀಕರಣವನ್ನು ಹರಿಹರದ ವಚನಾನಂದ ಸ್ವಾಮೀಜಿ ವೀಕ್ಷಿಸಿದರು.
ಆನಂದಪುರ ಸಮೀಪದ ಮುರುಘಾಮಠದಲ್ಲಿ ನಡೆಯುತ್ತಿರುವ ತಾಳೆಗರಿಗಳ ಡಿಜಿಟಲೀಕರಣವನ್ನು ಹರಿಹರದ ವಚನಾನಂದ ಸ್ವಾಮೀಜಿ ವೀಕ್ಷಿಸಿದರು.   

ಆನಂದಪುರ: ಕನ್ನಡ ಸಾಹಿತ್ಯ ಲೋಕದಲ್ಲಿ ವಚನ ಸಾಹಿತ್ಯವು ಅಗ್ರ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ‌ವಚನಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಮುರುಘಾಮಠದಲ್ಲಿ ಇತಿಹಾಸ ಸಾರುವ ತಾಳೆಗರಿಯ ಡಿಜಿಟಲೀಕರಣವನ್ನು ವೀಕ್ಷಿಸಿ ಮಾತನಾಡಿದರು.

ತಾಳೆಗರಿ ರೂಪದಲ್ಲಿರುವ ವಚನ ಸಾಹಿತ್ಯವನ್ನು ಡಿಜಿಟಲೀಕರಣ ಮಾಡಿರುವುದರಿಂದ ಮುಂದಿನ ಪಿಳಿಗೆಗೆ ಸುಲಭವಾಗಿ ತಿಳಿಸಲು ಅನುಕೂಲವಾಗಿದೆ. ಯಾವುದೇ ಒಂದು ಮಠ ಪರಂಪರೆ ಸಾವಿರಾರು ವರ್ಷ ಉಳಿಯಬೇಕಾದರೆ ಇಂತಹ ಮಹತ್‌ ಕಾರ್ಯಗಳು ಆಗಬೇಕು ಎಂದು ಹೇಳಿದರು.

ADVERTISEMENT

ಹರಿಯುವ ನದಿಯಂತೆ, ಉದಯಿಸುವ ಸೂರ್ಯನಂತೆ, ಬಿಸುವ ಗಾಳಿಯಂತೆ ನಿರಂತರವಾಗಿ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಕೆಲಸ ಆಗಬೇಕು. ಹಿಂದೆ ಸಾಹಿತ್ಯದ ಉಳಿವಿಗೆ ಪ್ರಯತ್ನಿಸಿದ ಫ.ಗು. ಹಳಕಟ್ಟಿ, ಎಂ.ಎಂ. ಕಲಬುರ್ಗಿ ಅವರ ರೀತಿ ಪ್ರಸ್ತುತ ಅಶೋಕ ದೊಮ್ಮಲೂರು ತಾಳೆಗರಿಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಸಾಹಿತ್ಯದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಸಮಾಜಕ್ಕೆ ಸದ್ವಿನಿಯೋಗ ಆಗಲಿ ಎನ್ನುವ ಉದ್ದೇಶದಿಂದ ತಾಳೆಗರಿಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಹಳಕಟ್ಟಿಯವರು ಮನೆ ಮನೆಗೆ ಹೋಗಿ ತಾಳೆಗರಿಗಳನ್ನು ಸಂಗ್ರಹ ಮಾಡುತ್ತಿದ್ದರು. ಎಂ.ಎಂ. ಕಲಬುರ್ಗಿಯವರ ಪ್ರೇರಣೆಯಿಂದ ದೊಟ್ಟಮಟ್ಟದಲ್ಲಿ ವಚನ ಸಾಹಿತ್ಯದ ತಾಳೆಗರಿಗಳನ್ನು ಸಂಗ್ರಹ ಮಾಡಲು ಸಾಧ್ಯವಾಯಿತು’ ಎಂದರು.

ಶಿವಮೊಗ್ಗದ ಬಸವಕೇಂದ್ರದ ಮರುಳಸಿದ್ಧ ಸ್ವಾಮೀಜಿ, ಡಿಜಿಟಲೀಕರಣದ ನೇತೃತ್ವ ವಹಿಸಿದ್ದ ಅಶೋಕ್ ದೊಮ್ಮಲೂರು, ವಿರೂಪಾಕ್ಷ ಮಟ್ಟಿ ಪ್ರಮುಖರಾದ ರಾಜೇಂದ್ರ, ಪ್ರಾಂಶುಪಾಲರಾದ ಕರುಣಾಕರ್ ಎನ್. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.