ಶಿವಮೊಗ್ಗ: ಸಮಾಜದ ಕ್ಷೀಣ ಧ್ವನಿಗಳಿಗೆ ಸಾಹಿತಿಗಳು ಕಿವಿಯಾಗಬೇಕು. ಸಮಾಜದ ಕೆಳಸ್ತರದ ಬದುಕು ಅರ್ಥ ಮಾಡಿಕೊಳ್ಳಬೇಕು ಎಂದು ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
ಯಾವುದೇ ವಿಷಯದ ಘೋಷಣೆ ಮಾಡುವುದು ಸಾಹಿತಿಯ ಕೆಲಸವಲ್ಲ. ಸಾಹಿತ್ಯ ಅರ್ಥ ಆಗದಿದ್ದರೆ ಅದು ಸಾಹಿತಿಯ ತಪ್ಪಲ್ಲ. ಗ್ರಹಿಸುವವರ ಲೋಪ, ಸಾಹಿತಿ ತಮ್ಮ ಅನುಭವಗಳನ್ನು ನೇರವಾಗಿ ಬರೆಯಬೇಕು. ಅದೇ ನಿಜವಾದ ಸಾಹಿತ್ಯ ಎಂದರು.
ಲೇಖಕಿ ವಿಜಯಾ ಶ್ರೀಧರ್ ಮಾತಾನಾಡಿ, ಸಾಹಿತ್ಯ ಚಟುವಟಿಕೆಗಳು ನಿರಂತರವಾದದು. ಸಾಹಿತ್ಯ ಬತ್ತದ ಸೆಲೆ. ಮೊದಲು ಸಾಹಿತ್ಯ ಪ್ರೀತಿ, ಪುಸ್ತಕ ಪ್ರೇಮ ಬೆಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಮಾತನಾಡಿ, ಸಾಹಿತ್ಯ ಅರಿವನ್ನು ವಿಸ್ತರಿಸುತ್ತದೆ. ಸಾಹಿತ್ಯವನ್ನು ಉಳಿಸಿ ಬೆಳೆಸುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ.ವಿಜಯಾದೇವಿ ಅಂಥವರು ವಿಧಾನ ಪರಿಷತ್ನಲ್ಲಿ ಕೆಲಸ ಮಾಡಬೇಕು. ವಿಧಾನ ಪರಿಷತ್ ಪರಿಣತ ಸಭೆಯಾಗಬೇಕು ಎಂದರು.
ಮರಾಠಿಗರ ಪುಡಾಟಿಕೆ ಸಹಿಸಲು ಸಾಧ್ಯವಿಲ್ಲ. ರಾಜ್ಯದ ಭೂ ಪ್ರದೇಶಗಳನ್ನು ತನ್ನದು ಎನ್ನುವ ಅವರ ಧೋರಣೆ ಖಂಡನೀಯ. ಅವರಿಗೆ ರಾಜ್ಯ ಸರ್ಕಾರ ತಕ್ಕ ಉತ್ತರ ಕೊಡಬೇಕು. ಕನ್ನಡಿಗರನ್ನು ಕೆಣಕಿದರೆ ಸಹಿಸುವುದಿಲ್ಲ. ಬೆಳಗಾವಿ ಸುವರ್ಣ ಸೌಧದಲ್ಲಿ ನಿರಂತರ ಕಾರ್ಯಕಲಾಪ ನಡೆಬೇಕು. ಎಲ್ಲರೂ ಒಟ್ಟಾಗಿ ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನ ಸರ್ವಾಧ್ಯಕ್ಷೆ ಡಾ. ವಿಜಯಾದೇವಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿದರು. ಸುನೀತಾರಾವ್, ಬಿ.ಡಿ.ಭೂಕಾಂತ್, ರುದ್ರಮುನಿ ಸಜ್ಜನ್, ಜಿ.ಪಿ.ಸಂಪತ್ಕುಮಾರ್, ಎಂ.ಎನ್.ಸುಂದರ್ ರಾಜ್, ಚನ್ನಬಸಪ್ಪ ನ್ಯಾಮತಿ, ಹಸನ್ ಬೆಳ್ಳಿಗನೂಡು, ಗೋಪಜ್ಜಿ ನಾಗಪ್ಪ, ಮಧುಗಣಪತಿರಾವ್ ಮಡೆನೂರು, ಕೆ.ಬಸವನಗೌಡರು, ತಿರುಮಲ ಮಾವಿನಕುಳಿ, ಹಿತಕರ ಜೈನ್, ಅಪೇಕ್ಷಾ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.