ADVERTISEMENT

ಕರಿಮನೆ ರಸ್ತೆಗೆ ಮಂಜೂರಾದ ಅನುದಾನ ವರ್ಗಾವಣೆ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:20 IST
Last Updated 20 ಫೆಬ್ರುವರಿ 2026, 4:20 IST
ಹೊಸನಗರ ತಾಲ್ಲೂಕು ಕರಿಮನೆ ಗ್ರಾಮ ರಸ್ತೆಗೆ ಮಂಜೂರಾದ ಅನುದಾನ ಬೇರೆಡೆ ವರ್ಗಾವಣೆ ಆಗಿರುವುದನ್ನು ವಿರೋಧಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹೊಸನಗರ ತಾಲ್ಲೂಕು ಕರಿಮನೆ ಗ್ರಾಮ ರಸ್ತೆಗೆ ಮಂಜೂರಾದ ಅನುದಾನ ಬೇರೆಡೆ ವರ್ಗಾವಣೆ ಆಗಿರುವುದನ್ನು ವಿರೋಧಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.   

ಕರಿಮನೆ: ರೂ.2.41 ಕೋಟಿ ಅನುದಾನ ಬೇರೆಡೆ ವರ್ಗಾವಣೆ. ಕೆಪಿಸಿ ಭದ್ರತಾ ವಾಹನ ತಡೆಗಟ್ಟಿ ಗ್ರಾಮಸ್ಥರ ಆಕ್ರೋಶ.

ಹೊಸನಗರ: ತಾಲ್ಲೂಕಿನ ಕರಿಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಅಭಿವೃದ್ದಿಗಾಗಿ ಮಂಜೂರಾದ ರೂ.2.41 ಕೋಟಿ ಅನುದಾನ ದಿಢೀರ್ ಬೇರೆಡೆ ವರ್ಗಾವಣೆ ಆಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಕೆಪಿಸಿ ಭದ್ರತಾ ಸಿಬ್ಬಂದಿ ವಾಹನವನ್ನು ತಡೆದು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಾಹನ ತಡೆಗಟ್ಟಿ, ರಸ್ತೆ ತಡೆ ನಡೆಸಿದ ಗ್ರಾಮಸ್ಥರು, ಸುಮಾರು 50 ವರ್ಷಗಳ ಹಿಂದೆ ಕರ್ನಾಟಕ ವಿದ್ಯುತ್ ನಿಗಮದವರು ಕರಿಮನೆ ಗ್ರಾಮದ ನಿಲ್ಸ್ ಕಲ್ ನಿಂದ ಸಾಲ್, ಹೊಸಬೀಡು, ಮಠದಜೆಡ್ಡು, ಹಲಸಿನಹಳ್ಳಿ, ಮಾನಿಕಾನ್, ಹಾಲಗದ್ದೆ ಮಾರ್ಗವಾಗಿ ಚಕ್ರಾ-ಸಾವೇಹಕ್ಲು ಡ್ಯಾಂಗೆ ಹೋಗಲು ಡಾಂಬರೀಕರಣ ರಸ್ತೆಯನ್ನು ನಿರ್ಮಿಸಿರುತ್ತಾರೆ. ಆದರೆ 50 ವರ್ಷಗಳಿಂದಲೂ ರಸ್ತೆಯನ್ನು ದುರಸ್ಥಿ ಮಾಡದೇ ಸಂಪೂರ್ಣವಾಗಿ ಹಾಳಾಗಿರುತ್ತದೆ. ಡ್ಯಾಂ ನಿರ್ಮಾಣವಾಗುವ ಸಂದರ್ಭದಲ್ಲಿ ತಮ್ಮ ಭೂಮಿ ಕಳೆದುಕೊಂಡು ನಿರಾಶ್ರಿತರಾಗಿ ಹಿನ್ನೀರಿನಲ್ಲಿ ವಾಸಿಸುತ್ತಿರುತ್ತಾರೆ. ಇಲ್ಲಿ ಸುಮಾರು 2000 ಜನಸಂಖ್ಯೆ ಇದ್ದು, ಶಾಲೆಗೆ ಹೋಗುವ ಮಕ್ಕಳು, ವೃದ್ಧರು, ಮಹಿಳೆಯರು, ಪರಿಶಿಷ್ಟ ಮತ್ತು ಪರಿಶಿಷ್ಟ ಪಂಗಡದವರು, ಕೂಲಿಕಾರ್ಮಿಕರು, ಅಂಗವಿಕಲರು ಹೀಗೆ ನಾನಾರೀತಿಯ ಜನಾಂಗದವರು, ವಾಸಿಸುತ್ತಿದ್ದಾರೆ.ಅವರು ಸದರಿ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ನಿಗಮದ ವಾಹನಗಳೂ ಸಹ ಇದೇ ರಸ್ತೆಯಲ್ಲಿ ಚಕ್ರಾ-ಸಾವೇಹಕ್ಕು ಡ್ಯಾಂಗಳಿಗೆ ಓಡಾಡುತ್ತಿರುತ್ತವೆ. ಆದರೆ ರಸ್ತೆ ದುರಸ್ತಿ ಮಾಡಿಲ್ಲ. ಇಂದು ನಿಗಮದ ನಿರ್ಲಕ್ಷ್ಯ ವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಈ ರಸ್ತೆಯನ್ನು ಕೆ.ಪಿ.ಸಿ.ಯ ಸಿ.ಆ‌ರ್.ಎಸ್ ಹಣದಿಂದ ದುರಸ್ತಿ ಪಡಿಸಬೇಕೆಂದು ಗ್ರಾಮ ಪಂಚಾಯಿತಿಯವರು ಹಾಗೂ ಸಾರ್ವಜನಿಕರು ಕೇಳಿಕೊಂಡ ಹಿನ್ನೆಲೆಯಲ್ಲಿ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕ‌ರ್ ಕೋರಿಕೆ ಮೇರೆಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಮುಖ್ಯಮಂತ್ರಿಗಳೂ ಸಹ ಈ ಕಾಮಗಾರಿಯನ್ನು ಅನುಮೋದಿಸಿ ನಿಗಮಕ್ಕೆ ಪತ್ರ ಕಳಿಸಿರುತ್ತಾರೆ. ನಿಗಮದವರು ರಸ್ತೆಯನ್ನು ಪರಿಶೀಲಿಸಿ, 2ಕೋಟಿ 41ಲಕ್ಷದ 80 ಸಾವಿರ ರೂಗಳಿಗೆ ಅಂದಾಜು ಪಟ್ಟಿಯನ್ನು ತಯಾರಿಸಿ ಕೇಂದ್ರ ಕಛೇರಿಗೆ ಕಳಿಸಿರುತ್ತಾರೆ. ಇಷ್ಟಾಗಿಯೂ ಕೇಂದ್ರ ಕಛೇರಿಯಲ್ಲಿ ಈ ಕಾಮಗಾರಿಯನ್ನು ಕೈಬಿಟ್ಟಿರುವುದಾಗಿ ನಮಗೆ ತಿಳಿದು ಬಂದಿದೆ ಎಂದು ಆರೋಪಿಸಿದರು. ಕರಿಮನೆ ಬಹಳ ಹಿಂದುಳಿದ ಪ್ರದೇಶವಾಗಿರುವ ಈ ಪ್ರದೇಶವನ್ನು ಪರಿಗಣಿಸಿ ಈ ಕಾಮಗಾರಿಯನ್ನು ಅನುಮೋದಿಸಿ ರಸ್ತೆ ದುರಸ್ಥಿ ಕಾರ್ಯವನ್ನು ಮಾಡಿಕೊಡಬೇಕಾಗಿ ಆಗ್ರಹಿಸಿದರು.‌

ಕಿಮ್ಮನೆ ರತ್ನಾಕರ್ ಭೇಟಿ: ಪ್ರತಿಭಟನೆ ವಿಷಯ ತಿಳಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಗ್ರಾಮಸ್ಥರಿಂದ ಮತ್ತು ಕೆಪಿಸಿ ಅಧಿಕಾರಿ ಪ್ರಕಾಶ ಬ್ರಹ್ಮಾವರ ರಿಂದ ಮಾಹಿತಿ ಪಡೆದುಕೊಂಡರು. ಈ ಸಂಬಂಧ ಕೆಪಿಸಿಗೆ ಮನವಿ ಕಳಿಸಿ. ನಾನು ಕೂಡ ಸಚಿವರು ಮತ್ತು ಕೆಪಿಸಿ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಅಲ್ಲಿ ತನಕ ಪ್ರತಿಭಟನೆ ಕೈಬಿಡಲು‌ ಮನವಿ ಮಾಡಿದರು. ಬಳಿಕ ಕೆಪಿಸಿ ಅಧಿಕಾರಿಗಳಿಗೆ ಆಗ್ರಹ ಪೂರ್ವಕ ಮನವಿಯನ್ನು ಗ್ರಾಮಸ್ಥರು ನೀಡಿ ಪ್ರತಿಭಟನೆ ಕೈಬಿಟ್ಟರು.

ಪ್ರಮುಖರಾದ ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ರಮೇಶ ಹಲಸಿನಳ್ಳಿ, ಸುಮಾ ಸುಬ್ರಹ್ಮಣ್ಯ, ಸುಧಾಕರ್, ಗೋಪಾಲ ನಿಲ್ಸಕಲ್, ಪರ್ವತಪ್ಪ ಗೌಡ, ಅಂಬರೀಷ ಸಾದಗಲ್, ಸತೀಶ ಪಟೇಲ್, ಸಂದೇಶ ಕೇರಗೋಡು, ಉದಯ ಕೊಠಾರಿ, ಕೃಷ್ಣಮೂರ್ತಿ ಕಾಡಿಗ್ಗೇರಿ, ರವಿ, ಚಕ್ರಾ, ಕಾನ್‌ಮನೆ, ಚಕ್ರಾ, ಹೊಸಬೀಡು, ಕರಿಮನೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.