ADVERTISEMENT

ಅಧಿಕಾರಕ್ಕೆ ಬಂದರೆ ವಿಐಎಸ್‌ಎಲ್, ಎಂಪಿಎಂ ಪುನರಾರಂಭ: ಕುಮಾರಸ್ವಾಮಿ

ಜೆಡಿಎಸ್ ಪಂಚರತ್ನ ರಥ ಯಾತ್ರೆ ಶಿವಮೊಗ್ಗ ಜಿಲ್ಲೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 12:38 IST
Last Updated 21 ಫೆಬ್ರುವರಿ 2023, 12:38 IST
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಾರೇನಹಳ್ಳಿ ಗ್ರಾಮದಲ್ಲಿ ಯಾತ್ರೆಗೆ ಚಾಲನೆ ನೀಡಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಾರೇನಹಳ್ಳಿ ಗ್ರಾಮದಲ್ಲಿ ಯಾತ್ರೆಗೆ ಚಾಲನೆ ನೀಡಿದರು.   

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ಕಾರೇನಹಳ್ಳಿ ಮೂಲಕ ಜೆಡಿಎಸ್‌ನ 69ನೇ ದಿನದ ಪಂಚರತ್ನ ರಥ ಯಾತ್ರೆ ಮಂಗಳವಾರ ಶಿವಮೊಗ್ಗ ಜಿಲ್ಲೆಯನ್ನು ಪ್ರವೇಶಿಸಿತು.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಾರೇನಹಳ್ಳಿ ಗ್ರಾಮದಲ್ಲಿ ಯಾತ್ರೆಗೆ ಚಾಲನೆ ನೀಡಿದರು.

ಸಾವಿರಾರು ಕಾರ್ಯಕರ್ತರು ಬೈಕ್ ರ್‍ಯಾಲಿ ಮೂಲಕ ಪಕ್ಷದ ಪರ ಘೋಷಣೆ ಕೂಗುತ್ತ, ದಾರಿ ಉದ್ದಕ್ಕೂ ಹೂವಿನ ಮಳೆಗರೆಯುತ್ತ ಸಾಗಿದರು.

ADVERTISEMENT

ಸುಡುವ ಬಿಸಿಲಿನಲ್ಲಿ ತೆರೆದ ವಾಹನದಲ್ಲಿ ಸಾಗಿ ಬಂದ ಕುಮಾರಸ್ವಾಮಿ ಅವರು, ಕೆಂಪೇಗೌಡ ನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

'ನಮ್ಮದು ರೈತರು, ಕೂಲಿ ಕಾರ್ಮಿಕರ ಪರವಾದ ಸರ್ಕಾರ ಎಂದು ಈಗಾಗಲೇ ಸಾಬೀತು ಪಡಿಸಿದ್ದೇವೆ. ಮುಂದಿನ ದಿನದಲ್ಲಿ ಈ ವರ್ಗದ ಜನರ ಕಣ್ಣೀರು ಒರೆಸುವುದು ನಮ್ಮ ಉದ್ದೇಶ. ಶಿಕ್ಷಣ, ವೈದ್ಯಕೀಯ, ಉದ್ಯೋಗ, ಕಡುಬಡವರ ಜೀರ್ಣೋದ್ಧಾರಕ್ಕೆ ಮನೆ ನಿರ್ಮಾಣ, ಕುಟುಂಬದ ಹಿರಿಯರಿಗೆ ₹5 ಸಾವಿರ ನೆರವು ಹಾಗೂ ಮಸಾಶನ ಈಗಿರುವ ₹ 1000 ದಿಂದ ₹ 2000ಕ್ಕೆ ಏರಿಕೆ ಮಾಡಲಾಗುವುದು. ರಾಜ್ಯದಲ್ಲಿ ಶ್ರೀಮಂತ, ಬಡವ ಎನ್ನುವ ಭೇದವಿಲ್ಲದೆ ಎಲ್ಲರೂ ಒಂದೇ ಎನ್ನುವ ಭಾವನೆ ಮೂಡಿಸುವುದು ನಮ್ಮ ಉದ್ದೇಶ ಎಂದರು.

ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಕಾರ್ಮಿಕರ ಬದುಕು ಬೀದಿಗೆ ಬೀಳಲು ಬಿಡುವುದಿಲ್ಲ. ಅವರ ಕಣ್ಣೀರಿನ ಅಳಲು ಆಲಿಸಲು ಮುಂದಿನ ದಿನದಲ್ಲಿ ಪಕ್ಷ ಅಧಿಕಾರಕ್ಕೆ ಬರಲಿದೆ. ಅದಕ್ಕೆ ನೀವು ಮನಸ್ಸು ಮಾಡ ಬೇಕು. ವಿಧಾನ ಸಭೆ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ' ಎಂದು ಮನವಿ ಮಾಡಿಕೊಂಡರು.

ಯಾತ್ರೆಯು ಮಧ್ಯಾಹ್ನ 2 ಗಂಟೆಗೆ ಬಾರಂದೂರು, ಕೆಂಚನಹಳ್ಳಿ ಗ್ರಾಮಕ್ಕೆ ತಲುಪಿತು. ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅಡಿಕೆ ತಟ್ಟೆಯ ಹಾರ ಹಾಕುವ ಮೂಲಕ ಸ್ವಾಗತಿಸಿದರು.

ಯಾತ್ರೆ ಮಾವಿನಕೆರೆ, ಹರೇಹಳ್ಳಿ, ಶಿವನಿ ಕ್ರಾಸ್, ಗೌರಾಪುರ, ಅಂತರಗಂಗೆ, ಕಾಚಗೊಂಡನಹಳ್ಳಿ, ಅಶ್ವಥ್ ನಗರ, ಶಿವಾಜಿ ವೃತ್ತ, ರಂಗಪ್ಪ ವೃತ್ತ, ಮಾಧವಾಚಾರ್ ವೃತ್ತ, ಹಾಲಪ್ಪ ವೃತ್ತ, ಅಂಡರ್ ಬ್ರಿಡ್ಜ್, ಕೆಎಸ್ಆರ್ ಟಿಸಿ ಡಿಪೋ, ಅಂಬೇಡ್ಕರ್ ವೃತ್ತ ಮೂಲಕ ಸಂಜೆ 5 ಗಂಟೆಗೆ ಭದ್ರಾವತಿಯ ಕನಕ ಮಂಟಪ ತಲುಪಲಿದೆ. ಅಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ರಾತ್ರಿ ನವುಲೆ ಬಸಾಪುರ ಗ್ರಾಮದಲ್ಲಿ ಎಚ್.ಡಿ ಕುಮಾರ ಸ್ವಾಮಿ ವಾಸ್ತವ್ಯ ಹೂಡಲಿದ್ದಾರೆ.

ರಥ ಯಾತ್ರೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ಶ್ರೀ ಕಾಂತ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.