ADVERTISEMENT

ಕಣ್ಣೀರು ಹಾಕಬೇಡಿ: ಮತ್ತೆ ಮಂತ್ರಿಯಾಗಿ ಬರುತ್ತೇನೆ -ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 4:57 IST
Last Updated 16 ಏಪ್ರಿಲ್ 2022, 4:57 IST
ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಲು ಶುಕ್ರವಾರ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ ವೇಳೆ ಕಣ್ಣೀರು ಹಾಕಿದ ಮಹಿಳೆಯರನ್ನು ಈಶ್ವರಪ್ಪ ಸಂತೈಸಿದರು.
ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಲು ಶುಕ್ರವಾರ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ ವೇಳೆ ಕಣ್ಣೀರು ಹಾಕಿದ ಮಹಿಳೆಯರನ್ನು ಈಶ್ವರಪ್ಪ ಸಂತೈಸಿದರು.   

ಶಿವಮೊಗ್ಗ: ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆ ನೀಡಲು ಶುಕ್ರವಾರ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿದ ವೇಳೆ ಕಾರ್ಯಕರ್ತರು ಕಣ್ಣೀರಿನ ಬೀಳ್ಕೊಡುಗೆ ನೀಡಿದರು.

ಬೆಂಗಳೂರಿಗೆ ತೆರಳುವ ಮುನ್ನ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಚಿವ ಈಶ್ವರಪ್ಪ ಅವರಿಗೆ ಕಾರ್ಯಕರ್ತರು ರಾಜೀನಾಮೆ ನೀಡಬೇಡಿ ಎನ್ನುತ್ತಾ ಕಣ್ಣೀರು ಸುರಿಸಿದರು. ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಗ್ರಾಮೀಣಾಭಿವೃದ್ಧಿ ಸಚಿವರಾಗಿ ಮುಂದುವರಿಯಬೇಕು ಎಂದು ಒತ್ತಾಯಿಸಿ ಘೋಷಣೆ ಕೂಗಿದರು.

ಈ ವೇಳೆ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಸಚಿವರು, ‘ನನ್ನ ಮೇಲೆ ಆಪಾದನೆ ಬಂದಿದೆ. ಆಪಾದನೆಯಿಂದ ಮುಕ್ತನಾಗಿ ಬರಬೇಕು ಎಂದರೆ ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡದಿದ್ದರೆ ತನಿಖೆಗೆ ಅಡ್ಡವಾಗಲಿದೆ ಎಂಬ ಭಾವನೆ ಇದೆ. ಹಾಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ನೀವು ಬೇಸರದಿಂದ ಕಳುಹಿಸಬಾರದು’ ಎಂದರು.

ADVERTISEMENT

‘ನೀವು ಅಪರಾಧಿ ಅಂತ ಅಲ್ಲವೆಂದ ಮೇಲೆ ರಾಜೀನಾಮೆ ಯಾಕೆ’ ಎಂದು ಮಹಿಳಾ ಕಾರ್ಯಕರ್ತರುಪ್ರಶ್ನಿಸಿದರು.

‘ಈ ಅಗ್ನಿಪರೀಕ್ಷೆಯನ್ನು ಎದುರಿಸಿ ಯಶಸ್ವಿಯಾಗಿ ಹೊರಬರುತ್ತೇನೆ. ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ವಹಿಸಿದಾಗ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ.ಪಕ್ಷದ ನಾಯಕರು ಈಗ ಪರ್ವ ಕಾಲವಾಗಿದ್ದು, ಪಕ್ಷ ಸಂಘಟನೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿದಾಗ ನಿಮಿಷವೂ ಯೋಚಿಸದೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಸಂಘಟನೆ ಮಾಡಿದೆ. ಈಗ ಆರೋಪ ಕೇಳಿಬಂದ ಕಾರಣ ರಾಜೀನಾಮೆ ಕೊಡುತ್ತಿದ್ದೇನೆ. ನಾಲ್ಕೈದುದಿನಗಳಿಂದ ರಾಜ್ಯದ ಜನರು, ಹಿರಿಯರು, ಮಠಾಧೀಶರು, ಕಾರ್ಯಕರ್ತರು, ಮುಖಂಡರ ಪ್ರೀತಿಯನ್ನು ಕಂಡು ಮಾತು ಬಾರದಾಗಿದೆ. ಅವರೆಲ್ಲರ ಪ್ರೀತಿಗೆ ಪಾತ್ರನಾಗಿದ್ದೇನೆ. ನೀವು ಸಂತೋಷದಿಂದ ನನ್ನನ್ನು ಕಳಿಸಿಕೊಡಿ’ ಎಂದು ಕೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.