ತೀರ್ಥಹಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಮಲೆನಾಡಿನ ಬಗರ್ಹುಕುಂ, ಮುಳುಗಡೆ ಸಂತ್ರಸ್ತರು, ಅಡಿಕೆ ಸಂಬಂಧ ಹತ್ತಾರು ಸಭೆಗಳು ನಡೆದಿವೆ. ಒಂದು ವರ್ಷ ಕಳೆದರೂಇಲ್ಲಿಯವರೆಗೆ ಸಭೆಯ ನಿರ್ಣಯ ಕೈಗೊಂಡಿಲ್ಲ ಎಂದು ಮಲೆನಾಡು ರೈತ ಹೋರಾಟ ಮುಖಂಡ ತೀ.ನಾ. ಶ್ರೀನಿವಾಸ್ ದೂರಿದರು.
ಸರ್ಕಾರ ಸಭೆಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ. ನಿರ್ಣಯ ಬರೆಯದ ಕಾರಣ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಅರಣ್ಯ ಇಲಾಖೆ ಇಂಡೀಕರಣ ಮಾಡಲು ಮುಂದಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದರು.
‘ಜಿಲ್ಲೆಯಲ್ಲಿ ಅರಣ್ಯ ಹಕ್ಕು ಸಂಬಂಧಿಸಿದಂತೆ 15 ಸಾವಿರ ಅರ್ಜಿಗಳಿವೆ. ಅದರಲ್ಲಿ 11 ಸಾವಿರ ಅರ್ಜಿ ವಜಾಗೊಂಡಿದ್ದು, ನೋಟಿಸ್ ಮಾತ್ರ ಜಾರಿ ಮಾಡಬೇಡಿ ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ಗೃಹಸಚಿವ, ಸಂಸದ, ಶಾಸಕರು ಕೈಮುಗಿಯುತ್ತಿದ್ದಾರೆ. ಇದೇ ರೀತಿ ಮುಖ್ಯಮಂತ್ರಿಗಳು ಸರ್ಕಾರ ಮುಖ್ಯ ಕಾರ್ಯದರ್ಶಿಗಳಿಗೆ ಕೈಮುಗಿಯುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸ್ವಂತಿಕೆ ಇಲ್ಲದೆ ಜನಪ್ರತಿನಿಧಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಸಿಗರೇಟು ಕಂಪನಿಗಳ ಲಾಭಿಯಿಂದ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವರದಿ ಸಿದ್ಧಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಶಾಸಕರು, ಸಚಿವರು ಹಾಗೂ ಎಲ್ಲಾ ಪಕ್ಷಗಳ ಸುಳ್ಳಿನಿಂದ ಜನರು ಭರವಸೆ ಕಳೆದುಕೊಂಡಿದ್ದಾರೆ. ಶರವಾತಿ ಹೋರಾಟ ಮುಂದುವರಿಸಲು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದೇನೆ. ಅರ್ಧಕ್ಕೆ ಕೈಬಿಟ್ಟರೆ ಮಲೆನಾಡು ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ಮುಂದವರಿಸುತ್ತೇವೆ’ ಎಂದು ತಿಳಿಸಿದರು.
ರಘು ವಿಠಲ ಸಂಕ್ಲಾಪುರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.