ADVERTISEMENT

ತೀರ್ಥಹಳ್ಳಿ: ಧರಣಿ ಹಿಂಪಡೆದ ಕಿಮ್ಮನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2023, 5:36 IST
Last Updated 27 ಜನವರಿ 2023, 5:36 IST
ತೀರ್ಥಹಳ್ಳಿ ಪಟ್ಟಣದ ಡಿವೈಎಸ್ಪಿ ಕಚೇರಿ ಎದುರು ಮಾಜಿ ಸಚಿವ ಕಿಮ್ಮನೆ ರತ್ನಾಕರ ಗುರುವಾರ ಮುಂಜಾನೆಯವರೆಗೂ ಧರಣಿ ನಡೆಸಿದರು
ತೀರ್ಥಹಳ್ಳಿ ಪಟ್ಟಣದ ಡಿವೈಎಸ್ಪಿ ಕಚೇರಿ ಎದುರು ಮಾಜಿ ಸಚಿವ ಕಿಮ್ಮನೆ ರತ್ನಾಕರ ಗುರುವಾರ ಮುಂಜಾನೆಯವರೆಗೂ ಧರಣಿ ನಡೆಸಿದರು   

ತೀರ್ಥಹಳ್ಳಿ: ಗೃಹ ಸಚಿವರ ಕುಮ್ಮಕ್ಕಿನಿಂದ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಬುಧವಾರ ರಾತ್ರಿ ಧರಣಿ ಕೈಗೊಂಡಿದ್ದ ಮಾಜಿ ಸಚಿವ ಕಿಮ್ಮನೆ ರತ್ನಾಕರ ಗುರುವಾರ ಮುಂಜಾನೆ ಧರಣಿ ಹಿಂಪಡೆದರು.

ಪೊಲೀಸರು ಕ್ರಮದ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಟ್ಟರು.

‘ಮಂಗಳವಾರ ನಡೆದ ಗಲಾಟೆಯಲ್ಲಿ ಭಾಗಿಯಾಗದ ವ್ಯಕ್ತಿಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಮೂವರು ವ್ಯಕ್ತಿಗಳು ನಿರ್ದೋಷಿಗಳಿದ್ದು ‘ಬಿ’ ರಿಪೋರ್ಟ್‌ ನೀಡುವ ತನಕ ಸ್ಥಳ ಬಿಡುವುದಿಲ್ಲ’ ಎಂದು ಶಪಥ ಮಾಡಿದ ಕಿಮ್ಮನೆ ರಾತ್ರಿಯಿಂದ ಮುಂಜಾನೆ
ಯವರೆಗೂ ಧರಣಿ ನಡೆಸಿದರು.

ADVERTISEMENT

ಡಿವೈಎಸ್ಪಿ ಸಂಧಾನದ ಪ್ರಯತ್ನ ನಡೆಸಿದ್ದರು. ಆದರೆ ಯಶಸ್ವಿ ಆಗಿರಲಿಲ್ಲ. ಮುಂಜಾನೆ ಕಿಮ್ಮನೆಗೆ ದೂರವಾಣಿ ಕರೆ ಮಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ‘ನಿರ್ದೋಷಿಗಳಿಗೆ ತೊಂದರೆ ಆಗದಂತೆ ದೋಷಾರೋಪ ಪಟ್ಟಿ ತಯಾರಿಸುತ್ತೇವೆ’ ಎಂದು ಭರವಸೆ ನೀಡಿದರು. ಇದರಿಂದ ಧರಣಿ ಹಿಂಪಡೆದರು.

‘ಗೃಹಸಚಿವರು ಅಸಮರ್ಥರು‌ ಅಂತ ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ. ಯಾವ ಇಲಾಖೆಯೂ ಅವರಿಗೆ ಸರಿ ಅಲ್ಲ’ ಎಂದು ಆರಗ ವಿರುದ್ಧ ಕಿಮ್ಮನೆ ವಾಗ್ದಾಳಿ ನಡೆಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಸದಸ್ಯರಾದ ಶಬನಮ್‌, ಗೀತಾ, ನಮ್ರತ್‌, ಮುಖಂಡರಾದ ಅಮ್ರಪಾಲಿ ಸುರೇಶ್‌, ಮೇಲಿನಕೊಪ್ಪ ಹರೀಶ್‌, ಆದರ್ಶ ಹುಂಚದಕಟ್ಟೆ, ಅಮರನಾಥ ಶೆಟ್ಟಿ ಇದ್ದರು.

‘ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಹೋರಾಟದ ಮೂಲಕ ನ್ಯಾಯ ಪಡೆಯಬೇಕು. ಬಿಜೆಪಿ ಹೊರತುಪಡಿಸಿ ಯಾವುದೇ ಪಕ್ಷಗಳ ದೂರು ದಾಖಲಿಸಿಕೊಳ್ಳುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಧ್ವನಿ ಅಡಗಿಸಲಾಗುತ್ತಿದೆ. ಭರವಸೆ ಈಡೇರದಿದ್ದರೆ ರಸ್ತೆತಡೆ ಹಮ್ಮಿಕೊಳ್ಳುತ್ತೇವೆ’ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.