ADVERTISEMENT

ಜಿಲ್ಲಾ ಸಮಿತಿ ರಚನೆ: ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:47 IST
Last Updated 15 ಆಗಸ್ಟ್ 2022, 4:47 IST
ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್   

ಶಿವಮೊಗ್ಗ: ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ನೂತನ ಜಿಲ್ಲಾ ಸಮಿತಿ ರಚಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

‘ವಿದ್ಯಾರ್ಥಿ ದೆಸೆಯಲ್ಲೇ ರೈತ ಸಂಘಟನೆಗೆ ಬಂದವನು. ಅಲ್ಲಿಂದ ಇಲ್ಲಿಯವರೆಗೆ ಮೂಲ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಈಗಲೂ ಸಂಘದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿದ್ದೇನೆ’ ಎಂದ ಅವರು, ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ರಾಜ್ಯದಲ್ಲಿ ಹಲವಾರು ಬಣಗಳಿದ್ದು, ನಾಯಿಕೊಡೆಗಳಂತೆ ಬಣಗಳು ಹುಟ್ಟಿಕೊಳ್ಳುತ್ತಿವೆ. ಎಚ್.ಆರ್.ಬಸವರಾಜಪ್ಪನವರ ಬಣಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದ ಅವರು,ನಿಮಗೆ ಮರ್ಯಾದೆ ಇದ್ದರೆ ಜಾತಿ, ವರ್ಗ ಬಿಟ್ಟು ಸಂಘದಲ್ಲಿರಿ. ಇಲ್ಲವಾದರೆ, ಹಸಿರು ಟವೆಲ್ ತೆಗೆದಿಟ್ಟು ಮನೆಗೆ ಹೋಗಿ’ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

ಐಗಳಕೊಪ್ಪದಲ್ಲಿ ರಾಜ್ಯ ರೈತ ಸಂಘದ ಸಭೆ: ಶನಿವಾರ ಶಿವಮೊಗ್ಗದ ತಾಳಗುಪ್ಪದ ಸಮೀಪ ಐಗಳಕೊಪ್ಪದಲ್ಲಿ 2 ದಿನಗಳ ಕಾಲ ರಾಜ್ಯ ರೈತ ಸಂಘದ ಸಭೆ ನಡೆಸಲಾಗಿದೆ. ಸಭೆಯಲ್ಲಿ ಹಲವಾರು ತೀರ್ಮಾನ ತೆಗೆದುಕೊಳ್ಳಲಾಗಿದೆ. 18 ಜಿಲ್ಲೆಗಳ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಸರ್ಕಾರ ಬೆಳೆ ವಿಮೆ ನಷ್ಟ ಭರಿಸುತ್ತಿಲ್ಲ. ಅತಿವೃಷ್ಟಿಯಿಂದಾಗಿ ಎಲ್ಲೆಡೆ ಬೆಳೆ ಹಾನಿಯಾಗಿದೆ. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.

ಎಕರೆಗೆ ತಕ್ಕಂತೆ ಪರಿಷ್ಕರಣೆ ಮಾಡಿ ನಷ್ಟ ಭರಿಸಿ ಕೊಡಲಿ. ಸಣ್ಣ ಮತ್ತು ಮಧ್ಯಮ ರೈತರು ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ರೈತರಲ್ಲದವರು ಕೂಡ ಭೂಮಿ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ರೈತರು ಭೀತಿಯಲ್ಲಿದ್ದಾರೆ. ತೆರಿಗೆಯಿಂದ ರಕ್ಷಿಸಿಕೊಳ್ಳಲು ಅನೇಕ ಬಂಡವಾಳಗಾರರಯ, ಭೂಮಿ ಮೇಲೆ ಹಣ ಹೂಡಿಕೆ ಮಾಡುತ್ತಿ ದ್ದಾರೆ. ಯಡಿಯೂರಪ್ಪ ಅವರ ಕಾಲಾವಧಿ ಯಲ್ಲಿ ಜಾರಿಗೆ ತಂದ ಈ ಯೋಜನೆ ಬಸವರಾಜ್ ಬೊಮ್ಮಾಯಿ ಕಾಲದಲ್ಲಿ ತುಂಬಾ ಜೋರಾಗಿ ಓಡುತ್ತಿದೆ ಎಂದು ಆರೋಪಿಸಿದರು.

ಈ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಾಯ್ದೆಯನ್ನು ಈ ಕೂಡಲೇ ಸರ್ಕಾರ ವಾಪಸ್ ತೆಗೆದುಕೊಳ್ಳಬೇಕು. ಇಲ್ಲ ವಾದರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದರು.

***

ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳು

ನೂತನ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಸೈಯದ್ ಶಫಿವುಲ್ಲಾ, ಜಿಲ್ಲಾ ಕಾರ್ಯಧ್ಯಕ್ಷರಾಗಿ ವೀರಭದ್ರಪ್ಪ ಗೌಡ ಬೆನ್ನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಬೇಡರಹೊಸಹಳ್ಳಿ, ಜಿಲ್ಲಾ ಉಪಾಧ್ಯಕ್ಷರಾಗಿ ಮಂಜುನಾಥ ಅರೇಕೊಪ್ಪ, ಅಮೃತ್ ರಾಜ್ ಹೀರೆ ಬಿಲಗುಂಜಿ, ಜಿಲ್ಲಾ ಕಾರ್ಯದರ್ಶಿಯಾಗಿ ಸತೀಶ್ ಬೆಲವಂತನಕೊಪ್ಪ, ಬಸರಾಜ ಬನ್ನೂರು, ಜಿಲ್ಲಾ ಸಂಚಾಲಕರಾಗಿ ಶಿಕಾರಿಪುರದ ಧನಂಜಯಪ್ಪ, ಸೊರಬದ ಸುನಿತಾ ಜಿಲ್ಲಾ ಮಹಿಳಾ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ ಎಂದುಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.