ADVERTISEMENT

ಹೊಳೆಹೊನ್ನೂರು: ಜಮೀನು ವಿವಾದ- ವ್ಯಕ್ತಿ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:07 IST
Last Updated 11 ಜುಲೈ 2021, 6:07 IST
ಶಿವಲಿಂಗಪ್ಪ
ಶಿವಲಿಂಗಪ್ಪ   

ಹೊಳೆಹೊನ್ನೂರು: ಸಮೀಪದ ತಿಮ್ಲಾಪುರ ಗ್ರಾಮದಲ್ಲಿ ಶನಿವಾರ ಜಮೀನು ವಿಚಾರ ಸಂಬಂಧ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದ್ದು, ಈ ಸಂಬಂಧ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಚಿಕ್ಕೂಲಿಕೆರೆ ಗ್ರಾಮದ ಶಿವಲಿಂಗಪ್ಪ (45) ಕೊಲೆಯಾದವರು. ಅವರು ಶನಿವಾರ ಬೆಳಿಗ್ಗೆ ತಿಮ್ಲಾಪುರ ಗ್ರಾಮದ ತಮ್ಮ ಮಾವನ ಜಮೀನಿಗೆ ತೆರಳುತ್ತಿದ್ದಾಗ 7ರಿಂದ 8 ಜನರ ಗುಂಪು ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದೆ ಎಂದು ದೂರು ದಾಖಲಾಗಿದೆ.

ಮಚ್ಚಿನಿಂದ ಹಲ್ಲೆ ಮಾಡಲಾಗಿದ್ದು, ಶಿವಲಿಂಗಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ADVERTISEMENT

ಪ್ರಕರಣದ ವಿವರ: ಶಿವಲಿಂಗಪ್ಪ ಅವರ ಮಾವ ಹೊನ್ನಪ್ಪ ಹಾಗೂ ಸೋಮಶೇಖರ್ ಎಂಬುವವರ ಮಧ್ಯೆ ತಿಮ್ಮಲ್ಲಾಪುರ ಗ್ರಾಮದ ಸರ್ವೆ ನಂ.41ರಲ್ಲಿರುವ ಒಂದು ಎಕರೆ ಜಮೀನು ಸಂಬಂಧ ವಿವಾದ ಇದ್ದು, ನ್ಯಾಯಾಲಯದ ಮೆಟ್ಟಿಲೇರಿತ್ತು.ಪ್ರಕರಣದ ವಿವಾದ ಇತ್ಯರ್ಥವಾಗಿ ಜಮೀನು ಶಿವಲಿಂಗಪ್ಪ ಅವರ ಪಾಲಾಗಿತ್ತು.

ಶಿವಲಿಂಗಪ್ಪ ಅವರ ಕಡೆಯವರು ನಾಲ್ಕೈದು ದಿನಗಳ ಹಿಂದೆ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಹಾಕಿದ್ದರು.ಶನಿವಾರ ಸೋಮಶೇಖರ್ ಕುಟುಂಬದವರು ಅದೇ ಜಮೀನಿನಲ್ಲಿ ಅಡಿಕೆ ಗಿಡ ಹಾಕಲು ಹೋಗಿದ್ದರು ಎನ್ನಲಾಗಿದೆ. ವಿಷಯ ತಿಳಿದು ಜಮೀನಿಗೆ ಹೋದ ಶಿವಲಿಂಗಪ್ಪನ ಮೇಲೆ ಸೋಮಶೇಖರ್ ಹಾಗೂ ಸಂಗಡಿಗರು ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.

ಈ ಸಂಬಂಧ15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು 5 ಜನರನ್ನು ಬಂಧಿಸಿದ್ದು, ಒಂದು ಆಟೊ ಹಾಗೂ ಎರಡು ಬೈಕ್‍ಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.