ಸಾಂದರ್ಭಿಕ ಚಿತ್ರ
ಆನಂದಪುರ: ಯುವಕನೊಬ್ಬ ಲಾಂಗ್ ಹಿಡಿದು ವಾಹನಗಳಿಗೆ ಬಿಸುತ್ತ ಒಡಾಡಿದ ಘಟನೆ ಭಾನುವಾರ ಆನಂದಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಗರದ ಶ್ರೀಧರ್ ನಗರದ ಸಮೀರ್, ಇಮ್ರಾನ್, ಅಕ್ರಂ, ಶಿವರಾಜ್ ಬಂಧಿತರು. ಇಮ್ರಾನ್, ಅಕ್ರಂ, ಶಿವರಾಜ್ ಆನಂದಪುರ ಸಮೀಪದ ಯಡೇಹಳ್ಳಿಯಲ್ಲಿ ಕಾರ್ಯಕ್ರಮ ಒಂದಕ್ಕೆ ಬಂದಿದ್ದರು. ನಂತರ ಆನಂದಪುರದ ಅಂಗಡಿಯೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆ ಹಿನ್ನೆಲೆಯಲ್ಲಿ ಇನ್ನೊಬ್ಬ ಯುವಕ ಸಮೀರ್ ಸಾಗರದಿಂದ ಬಂದಿದ್ದಾನೆ. ಸಮೀರ್ ಆನಂದಪುರದಲ್ಲಿ ಮಾರಟಕ್ಕಿಟ್ಟಿದ್ದ ಲಾಂಗ್ ತೆಗೆದುಕೊಂಡು ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿ ಎಂದು ಕೂಗಾಡುತ್ತಾ ಲಾಂಗ್ ಬಿಸುತ್ತಾ ಓಡಿದ್ದಾನೆ.
ಅನಾಹುತ ತಪ್ಪಿಸಿದ ಸ್ಥಳೀಯರು: ಲಾಂಗ್ ಬಿಸುತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋಗುವುದನ್ನು ಗಮನಿಸಿದ ಸ್ಥಳೀಯರು ಯುವಕನನ್ನು ಹಿಂಬಾಲಿಸಿ ಲಾಂಗ್ ಕಸಿದು ಕೆರೆಗೆ ಎಸೆದು ಆಗಬಹುದಾದ ಅನಾಹುತ ತಪ್ಪಿಸಿದ್ದಾರೆ. ಬಳಿಕ ಯುವಕನನ್ನು ಆನಂದಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಪೋಲಿಸರು ಉಳಿದ ಮೂವರು ಆರೋಪಿಗಳನ್ನು ಸಾಗರ ಸಮೀಪ ಬಂಧಿಸಿದ್ದಾರೆ.
ಗಾಂಜಾ ಸೇವನೆ ಮಾಡಿದ್ದ ಆರೋಪಿಗಳು: ಆರೋಪಿಗಳನ್ನು ಸಾಗರದ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆಗೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಆನಂದಪುರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ, ಸಾಗರದ ಸಬ್ಇನ್ಸ್ಪೆಕ್ಟರ್ ಯಲ್ಲಪ್ಪ ಹಾಗೂ ಸಿಬ್ಬಂದಿ ಉಳಿದ ಮೂವರ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.