ADVERTISEMENT

ಅಭೂತಪೂರ್ವ ಮೈತ್ರಿ, ಗೆಲುವು ಖಾತ್ರಿ: ಮಧು ಬಂಗಾರಪ್ಪ

ಚಂದ್ರಹಾಸ ಹಿರೇಮಳಲಿ
Published 30 ಏಪ್ರಿಲ್ 2019, 15:48 IST
Last Updated 30 ಏಪ್ರಿಲ್ 2019, 15:48 IST
   

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಎಸ್.ಮಧು ಬಂಗಾರಪ್ಪ ಅವರು ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡ ಮನದ ಮಾತಿನ ಅಕ್ಷರ ರೂಪ ಇಲ್ಲದೆ.

* ಉಪ ಚುನಾವಣೆಯಲ್ಲಿ ‘ಮೈತ್ರಿ’ ಇದ್ದರೂ ಸೋಲು ಏಕೆ?

ಉಪ ಲೋಕಸಭಾ ಚುನಾವಣೆಯ ಸ್ಪರ್ಧೆ ಅನಿರೀಕ್ಷಿತ. ನಾಲ್ಕು ತಿಂಗಳಿಗೆ ಸೀಮಿತವಾಗಿ ಎದುರಾದ ಉಪ ಸಮರಕ್ಕೆ ಇಳಿಯಬೇಕು ಎಂದು ಎರಡೂ ಪಕ್ಷಗಳ ಮುಖಂಡರು ಸೂಚಿಸಿದ್ದರು. ಅವರ ಒತ್ತಾಸೆಗೆ ಇಲ್ಲ ಎನ್ನಲಾಗದೆ ಸ್ಪರ್ಧೆಗೆ ಇಳಿದೆ. ಆಗ ಸಿಕ್ಕಿದ್ದು ಕೇವಲ 13 ದಿನಗಳು. ಅಲ್ಲದೆ, ಕಾಂಗ್ರೆಸ್ ಒಂದು ದೊಡ್ಡ ಪರಿವಾರ. ತೆನೆಹೊತ್ತ ಮಹಿಳೆಗೆ ಆ ಮತಗಳನ್ನು ಪರಿವರ್ತಿಸಲು ಸ್ವಲ್ಪ ಸಮಯ ಬೇಕಿತ್ತು.

ADVERTISEMENT

* ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿಯಲ್ಲೇ ಒಮ್ಮತ ಇಲ್ಲವಲ್ಲ?

ಈಗ ಎಲ್ಲ ಸರಿಯಾಗಿದೆ. ಹಲವು ದಶಕಗಳು ಪರಸ್ಪರ ವಿರುದ್ಧ ಸೆಣಸಿದ್ದ ನಾಯಕರು ಒಟ್ಟಿಗೆ ಹೋಗಲು ಒಂದಷ್ಟು ಮಾನಸಿಕ ಸಿದ್ಧತೆಬೇಕಿತ್ತು. ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿದ್ದರು. ಆದರೆ, ಒಟ್ಟಿಗೆ ಹೋಗಿರಲಿಲ್ಲ. ಈಗ ಎಲ್ಲರೂ ಒಟ್ಟಿಗೆ ಹೋಗುತ್ತಿದ್ದೇವೆ. ಬೈಂದೂರಿನಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲದಿದ್ದರೂ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು 50 ಸಾವಿರ ಮತ ಕೊಡಿಸಿದ್ದಾರೆ. ಬಿಜೆಪಿಗೆ ಬಿದ್ದ ಮತಗಳು 5 ಲಕ್ಷಕ್ಕೆ ನಿಂತಿದೆ.

* ಜನರು ನಿಮಗೇ ಏಕೆ ಮತಹಾಕಬೇಕು?

ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರ 10 ವರ್ಷಗಳು ಈ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಯಾವ ಕೆಲಸವನ್ನೂ ಮಾಡಿಲ್ಲ. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಗೆ ಸಂಸತ್‌ನಲ್ಲಿ ಪ್ರಶ್ನಿಸಿಲ್ಲ. ಕಸ್ತೂರಿ ರಂಗನ್‌ ವರದಿ ತಿರಸ್ಕರಿಸಿಲ್ಲ. ಭದ್ರಾವತಿ ವಿಐಎಸ್‌ಎಲ್‌, ಎಂಪಿಎಂ ಕಾರ್ಖಾನೆಗಳು ಚುನಾವಣಾ ಸಮಯದಲ್ಲಷ್ಟೇ ಅವರಿಗೆ ನೆನಪಾಗುತ್ತವೆ. ವಿಐಎಸ್‌ಎಲ್‌ ಪುನರುಜ್ಜೀವನಕ್ಕೆ ಕ್ರಮ ಕೈಗೊಂಡಿಲ್ಲ. ತುಮರಿ ಸೇತುವೆ ವಿಷಯದಲ್ಲೂ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಾಗ ಬಿಜೆಪಿ ನಾಯಕರು, ಶಾಸಕರು ಹರಿಯಾಣ ರೆಸಾರ್ಟ್‌ನಲ್ಲಿ ಚಳಿಗೆ ಬೆಂಕಿ ಕಾಯಿಸುತ್ತಿದ್ದರು. ನನಗೆ ಮತ ಹಾಕಿದರೆ ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಕ್ಷೇತ್ರದಲ್ಲೇ ಇದ್ದು, ಮಾದರಿ ಕ್ಷೇತ್ರವಾಗಿ ಪರಿವರ್ತಿಸುವೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಕಾರಣ ಅಭಿವೃದ್ಧಿಗೂ ಸಹಕಾರಿಯಾಗಲಿದೆ.

* ‘ಪ್ಯಾಕೇಜ್‌ ಅಭ್ಯರ್ಥಿ’ ಎಂಬ ಆರೋಪ ಇದೆಯಲ್ಲ?

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಾಗ ಬೇಸರವಾಗಿದ್ದು ನಿಜ. ವಿದೇಶಕ್ಕೆ ಹೋಗಿದ್ದಾಗಲೇ ಉಪ ಚುನಾವಣೆ ಘೋಷಣೆಯಾಗಿತ್ತು. ಮೈತ್ರಿ ಮುಖಂಡರ ಕರೆಗೆ ಓಗೊಟ್ಟು ವಾಪಸ್ ಬಂದೆ. ನಾನುವಿದೇಶದಲ್ಲೇ ನೆಲೆಸಿದ್ದೇನೆ ಎಂಬಂತೆ ಬಿಜೆಪಿ ಬಿಂಬಿಸಿತು. ಉಪ ಚುನಾವಣೆಯಲ್ಲಿ ಸೋಲು ಕಂಡರೂ ಜಿಲ್ಲೆಯ ಏತನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಿಸಲು ಶ್ರಮಿಸಿರುವೆ. ಇದನ್ನು ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರಿಗೆ ‘ರೈಲು’ ಬಿಡುವುದೇ ಕಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.