ADVERTISEMENT

ಪ್ರವಾಹ ಪೀಡಿತ ಪ್ರದೇಶಕ್ಕೆ ಮಧು ಬಂಗಾರಪ್ಪ ಭೇಟಿ: ಪರಿಹಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 15:32 IST
Last Updated 20 ಜುಲೈ 2024, 15:32 IST
ಸೊರಬ ತಾಲ್ಲೂಕಿನ ವರದಾ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶನಿವಾರ ಭೇಟಿ ನೀಡಿದ್ದರು
ಸೊರಬ ತಾಲ್ಲೂಕಿನ ವರದಾ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು ಗ್ರಾಮದ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶನಿವಾರ ಭೇಟಿ ನೀಡಿದ್ದರು   

ಸೊರಬ: ಮಳೆಗಾಲದ ಸಂದರ್ಭದಲ್ಲಿ ವರದಾ ಹಾಗೂ ದಂಡಾವತಿ ನದಿ ಪ್ರವಾಹದಿಂದ ಬೆಳೆ ಕಳೆದುಕೊಳ್ಳುವ ರೈತರಿಗೆ ಸಕಾಲಕ್ಕೆ ಬೆಳೆ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲ್ಲೂಕಿನ ವರದಾ ನದಿ ಪ್ರವಾಹದಿಂದ ಮುಳುಗಡೆ ಹೊಂದಿರುವ ಕಡಸೂರು, ಹೊಳೆ ಜೋಳದಗುಡ್ಡೆ, ಬಂಕಸಾಣ ಗ್ರಾಮದ ನೆರೆಪೀಡಿತ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಮಳೆಗಾಲ ಇನ್ನೂ ಮುಂದುವರೆಯಲಿದ್ದು, ಒಂದು ತಿಂಗಳ ನಂತರ ಮಳೆಯಿಂದ ಆಗಿರುವ ಹಾನಿಯನ್ನು ಕ್ರೋಡೀಕರಿಸಿ ಎಲ್ಲಾ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ ವರದಿ ಪಡೆದು ನಿಗದಿತ ಸಮಯದಲ್ಲಿ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗೆ ಸೂಚಿಸಿದರು. ಮಳೆಯಿಂದ ಹಾನಿಗೊಳಗಾದ ಶಾಲಾ ಕಟ್ಟಡ, ರಸ್ತೆ, ಜಮೀನು ಹಾಗೂ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಪಡೆದುಕೊಳ್ಳಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಸ್ಥಳೀಯ ಮುಖಂಡರು ಫಲಾನುಭವಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ADVERTISEMENT

ತಾಲ್ಲೂಕಿನ ವರದಾ ನದಿಗೆ ಅಡ್ಡಲಾಗಿ 5 ಭಾಗಗಳಲ್ಲಿ ‌ಬ್ಯಾರೇಜ್ ನಿರ್ಮಾಣಕ್ಕೆ ₹ 53 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಟೆಂಡರ್ ಪ್ರತಿಕ್ರಿಯೆ ಮುಗಿಯುತ್ತಿದ್ದಂತೆ ಕಾಮಗಾರಿ ಆರಂಭಿಸಲಾಗುವುದು. ಈ ಯೋಜನೆಯನ್ನು ದಂಡಾವತಿ ನದಿಗೆ ಅಡ್ಡಲಾಗಿ ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಾಗರ ಉಪ ವಿಭಾಗಾಧಿಕಾರಿ ಡಾ.ಯತೀಶ್ ಸಿಇಒ ಸುರೇಶ್, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್,ಕೆ.ಜಿ., ಎಂಜನಿಯರ್‌ಗಳಾದ ಚಂದ್ರಪ್ಪ, ಗಣಪತಿ ನಾಯ್ಕ, ಸೌಮ್ಯಾ, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ತಬಲಿ ಬಂಗಾರಪ್ಪ, ಎಂ.ಡಿ. ಶೇಖರ್, ಕೆ.ವಿ.ಗೌಡ, ಪ್ರಕಾಶ್, ಉಮಾಪತಿ ತೌಡತ್ತಿ, ಜಗದೀಶ್ ಕುಪ್ಪೆ, ಸತ್ಯನಾರಾಯಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.