ಶಿವಮೊಗ್ಗ: ಜಿಲ್ಲೆಯಲ್ಲಿ ಶನಿವಾರ ನಾಗರಿಕರು ಮಕರ ಸಂಕ್ರಾತಿಯನ್ನು ಸಂಭ್ರಮ, ಸಡಗರದಿಂದ ಆಚರಿಸಿದರು .
ಸೂರ್ಯ ತನ್ನ ಪಥ ಬದಲಿಸಿದ ಕ್ಷಣ, ಗ್ರಾಮೀಣ ಭಾಗದ ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿ ಅಂಗವಾಗಿ ನಗರದ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು.
ಮಹಿಳೆಯರು ಬಣ್ಣದ ಸೂರೆಯುಟ್ಟು ಮನೆ, ಅಂಗಳದಲ್ಲಿ ಸಂಕ್ರಾಂತಿ ಚಿತ್ತಾರದ ರಂಗೋಲಿ ಬಿಡಿಸಿ, ಸಂಭ್ರಮಿಸಿದರು. ನಗರ, ಪಟ್ಟಣಗಳಲ್ಲಿ ಸಂಜೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ, ನಂತರ ಮನೆ ಮನೆಗೆ ತೆರಳಿ ಕಬ್ಬಿನ ತುಂಡು, ಎಳ್ಳು–ಬೆಲ್ಲದ ಅಚ್ಚು ಹಂಚಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಗ್ರಾಮೀಣ ಪ್ರದೇಶಗಳಲ್ಲಿ ಹಸು–ಕರಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಧವಸ, ಧಾನ್ಯದ ರಾಶಿ ಜತೆಗೆ, ಕೃಷಿ ಪರಿಕರಗಳನ್ನೂ ಪೂಜಿಸುವ ಮೂಲಕ ಸುಗ್ಗಿಯ ಹಬ್ಬ ಆಚರಿಸಿದರು. ಚುಮುಚುಮು ಚಳಿಯ ನಡುವೆ ಸಂಭ್ರಮಿಸುವ ಈ ಹಬ್ಬದಲ್ಲಿ ಎಳ್ಳು, ಬೆಲ್ಲ, ಕಬ್ಬು, ತರಕಾರಿ ಬೆಲೆ ಗಗನಕ್ಕೇರಿದ್ದ ಪರಿಣಾಮ ಖರೀದಿ ವೇಳೆ ಸಾಕಷ್ಟು ಚೌಕಾಸಿ ನಡೆಸುತ್ತಿದ್ದ ದೃಶ್ಯ ಕಂಡುಬಂತು.
ನಗರದ ಗುಡ್ಡೇಕಲ್ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಹಸು ಪೂಜೆ, ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಜ್ಯೋತಿ ಪೂಜೆ, ಇತರೆ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು. ರವೀಂದ್ರ ನಗರ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.