ಸಾಗರ: ಈ ವರ್ಷ ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಅತೀ ಹೆಚ್ಚು ಮಳೆ ಸುರಿದಿದ್ದು, ಅತಿವೃಷ್ಟಿಯಿಂದ ಬೆಳೆಗಳಿಗೆ, ರಸ್ತೆ, ಸೇತುವೆಗಳಿಗೆ ತೀವ್ರ ಹಾನಿ ಉಂಟಾಗಿದೆ. ಹಾಗಾಗಿ ಮಲೆನಾಡು ಭಾಗಕ್ಕೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.
ಅಡಿಕೆ ಮಲೆನಾಡಿನ ಪ್ರಮುಖ ಬೆಳೆಯಾಗಿದೆ. ಕೊಳೆ ರೋಗದ ಜೊತೆಗೆ ಎಲೆಚುಕ್ಕಿ ರೋಗದ ಬಾಧೆ ಕಾಣಿಸಿಕೊಂಡಿರುವುದು ಬೆಳೆಗಾರರನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಬೆಳೆಗಾರರಿಗೆ ಪರಿಹಾರ ನೀಡಲು ವಿಶೇಷ ಪ್ಯಾಕೇಜ್ ಕೊಡಿಸಿದ್ದರು. ಅದೇ ಮಾದರಿಯಲ್ಲಿ ಈ ವರ್ಷ ಪರಿಹಾರ ನೀಡಬೇಕು ಎಂದು ಸರ್ಕಾರದ ಎದುರು ಬೇಡಿಕೆ ಮಂಡಿಸಿದರು.
ಅತಿವೃಷ್ಟಿಯಿಂದ ಅನೇಕ ಕಡೆ ಮನೆಗಳು ಕುಸಿದಿವೆ. ಕಳೆದ ವರ್ಷ ಹಾನಿ ಅನುಭವಿಸಿದವರಿಗೆ ಇನ್ನೂ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹಕ್ಕುಪತ್ರ ಇಲ್ಲದಿದ್ದರೂ ಪರಿಹಾರ ನೀಡಬಹುದು ಎಂದು ಸರ್ಕಾರ ಮಾನದಂಡ ಬದಲಿಸಿರುವುದು ಒಳ್ಳೆಯ ನಡೆಯಾಗಿದೆ. ಶೀಘ್ರ ತೊಂದರೆಗೆ ಒಳಗಾದವರಿಗೆ ಪರಿಹಾರ ದೊರಕುವಂತಾಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.