ADVERTISEMENT

ಮ್ಯಾಕ್ಸ್ ಆಸ್ಪತ್ರೆ: ‘ಮಹಾಪಧಮನಿ ರಕ್ತನಾಳಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ’

-

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:36 IST
Last Updated 16 ಆಗಸ್ಟ್ 2025, 7:36 IST

ಶಿವಮೊಗ್ಗ: ‘ಭದ್ರಾವತಿ ತಾಲ್ಲೂಕಿನ 35 ವರ್ಷದ ಶಿಕ್ಷಕಿಯೊಬ್ಬರ ಮಹಾಪಧಮನಿಯ ಮುಖ್ಯ ರಕ್ತನಾಳ ಒಡೆದು ಹೋಗಿತ್ತು. ಇದಕ್ಕೆ ಸುದೀರ್ಘ ಐದು ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸಲಾಗಿದೆ’ ಎಂದು ಮ್ಯಾಕ್ಸ್ ಆಸ್ಪತ್ರೆಯ ಹೃದ್ರೋಗ ವಿಭಾಗದ ತಜ್ಞ ವೈದ್ಯ ಡಾ. ಸುಧೀರ್‌ ಭಟ್ ತಿಳಿಸಿದರು.

‘ರೋಗಿಗೆ ಕೆಲ ದಿನಗಳ ಹಿಂದೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ವೇಳೆ ಮಹಾಪಧಮನಿಯ ದೊಡ್ಡ ರಕ್ತನಾಳ ಉಬ್ಬಿ ಒಡೆದು ಹೋಗಿರುವುದು ಆಸ್ಪತ್ರೆಯ ವೈದ್ಯರು ಪತ್ತೆ ಹಚ್ಚಿದ್ದರು. ಇದರಿಂದ, ದೇಹದ ಇತರೆ ಭಾಗಗಳಿಗೆ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ತೀವ್ರ ರಕ್ತಸ್ರಾವದಿಂದ ರೋಗಿಯ ಜೀವಕ್ಕೂ ತೊಂದರೆ ಆಗುವ ಸಾಧ್ಯತೆ ಇತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕ್ಷಣ ಕ್ಷಣಕ್ಕೂ ರೋಗಿಗೆ ರಕ್ತದೊತ್ತಡ ಕಡಿಮೆಯಾಗುತ್ತಿತ್ತು. ರಕ್ತಸ್ರಾವದ ಪರಿಣಾಮ ಹಿಮೋಗ್ಲೋಬಿನ್ ಕಡಿಮೆಯಾಗಿತ್ತು. ತಕ್ಷಣವೇ ರಕ್ತಟ್ರಾನ್ಸೂಷನ್ ಮಾಡಿ ರಕ್ತದ ಒತ್ತಡವನ್ನು ಮೇಲೆ ತರುವ ಹಾಗೂ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸುವ ಹೊಣೆ ಅರವಳಿಕೆ ತಜ್ಞರಾದ ಡಾ. ಶ್ರೀನಿವಾಸ್ ಮತ್ತು ಡಾ.ಶಿವಕುಮಾ‌ರ್ ಹೊತ್ತುಕೊಂಡಿದ್ದರು. ಇದರ ಪರಿಣಾಮ ರೋಗಿಯ ಜೀವ ಉಳಿಸುವಲ್ಲಿ ಯಶಸ್ವಿ ಆಗಿದ್ದೇವೆ ಎಂದರು. 

ADVERTISEMENT

‘ತೀವ್ರತರವಾದ ಹೊಟ್ಟೆ ನೋವಿನಿಂದ ಬದುಕುತ್ತೇನೆ ಎಂಬ ವಿಶ್ವಾಸವನ್ನೇ ಕಳೆದುಕೊಂಡಿದ್ದೆ. ಮ್ಯಾಕ್ಸ್ ಆಸ್ಪತ್ರೆಗೆ ದಾಖಲಾಗಿ ಡಾ. ಸುಧೀಂದ್ರ ಭಟ್ ಅವರ ತಂಡ ಶಸ್ತ್ರಚಿಕಿತ್ಸೆ ಮಾಡಿದ ಪರಿಣಾಮ ಪ್ರಾಣ ಉಳಿದಿದೆ ಎಂದು ಚಿಕಿತ್ಸೆ ಪಡೆದು ಗುಣಮುಖರಾದ ಶಿಕ್ಷಕಿ ತಿಳಿಸಿದರು.

ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕಿ ಲತಾ ನಾಗೇಂದ್ರ, ಮುಖ್ಯವೈದ್ಯಾಧಿಕಾರಿ ಡಾ. ಕೌಶಿಕ್, ವೈದ್ಯರಾದ ಡಾ. ವಿನಯಾ ಶ್ರೀನಿವಾಸ್, ಅರವಳಿಕೆ ತಜ್ಞ ಡಾ. ಶ್ರೀನಿವಾಸ್, ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ರಾಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.