
ಭಾಸ್ಕರ್ ಆರ್. ಗೆಂಡ್ಲ
ಸೊರಬ: ತಾಲ್ಲೂಕಿನಲ್ಲಿ ಮೆಕ್ಕೆಜೋಳಕ್ಕೆ ಕಟಾವಿನ ಆರಂಭದಲ್ಲೇ ಉತ್ತಮ ಧಾರಣೆ ಲಭ್ಯವಾಗುತ್ತಿದೆ. ಆದರೆ ಅತಿವೃಷ್ಟಿಯು ಇಳುವರಿ ಮೇಲೆ ತೀವ್ರ ಪರಿಣಾಮ ಬೀರಿದೆ. ಬೆಲೆ ಇದ್ದಾಗ ಬೆಳೆ ಇಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನಲ್ಲಿ ಈ ಬಾರಿ ಅಂದಾಜು 6,000 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಕಳೆದ ಬಾರಿ 10,000 ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ಇತ್ತು. ಜೋಳ ಬಿತ್ತನೆಗೆ ಮಳೆ ಅಡ್ಡಿಪಡಿಸಿದ ಕಾರಣ, ಈ ಬಾರಿ 4,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
‘ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಮೆಕ್ಕೆಜೋಳ ಗರಿಷ್ಠ ₹ 2,500 ರವರೆಗೂ ಮಾರಾಟವಾಗುತ್ತಿದೆ. ಈ ಮೊದಲು ಪ್ರತಿ ಕ್ವಿಂಟಲ್ ₹ 1,500 ದಿಂದ ₹ 2,000 ದರ ಇರುತ್ತಿತ್ತು. ಈ ಹಿಂದೆ, ಬೆಂಬಲಬೆಲೆ ಅಡಿ ಮೆಕ್ಕೆಜೋಳ ಖರೀದಿಸುವಂತೆ ಸರ್ಕಾರವನ್ನು ಆಗ್ರಹಿಸಬೇಕಿತ್ತು. ಈಗ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತಲೂ ಮೆಕ್ಕೆಜೋಳದ ದರ ಹೆಚ್ಚಿದೆ’ ಎಂದು ರೈತರು ತಿಳಿಸಿದರು.
‘ತಾಲ್ಲೂಕಿನಲ್ಲಿ ಅತಿವೃಷ್ಟಿಯ ಕಾರಣಕ್ಕೆ ಅರ್ಧದಷ್ಟು ಇಳುವರಿ ಕುಂಠಿತವಾದರೆ, ಮುಂಗಾರಿನಲ್ಲಿ ಭೂಮಿ ಹದವಿಲ್ಲದೆ ಬಹುಪಾಲು ರೈತರು ಜೋಳವನ್ನೇ ಬಿತ್ತಿರಲಿಲ್ಲ. ಕಳೆದ ವರ್ಷ 2 ಎಕರೆಯಿಂದ 30 ಕ್ವಿಂಟಲ್ ಫಸಲು ಬಂದಿತ್ತು. ಈ ಬಾರಿ 18 ಕ್ವಿಂಟಲ್ ಮಾತ್ರ ಸಿಕ್ಕಿದೆ. ಮೆಕ್ಕೆಜೋಳಕ್ಕೆ ಇನ್ನಷ್ಟು ದರ ಲಭಿಸಿದರೆ ಹಾಕಿದ ಬಂಡವಾಳ ರೈತರ ಕೈ ಸೇರುತ್ತದೆ. ಇಳಿಕೆಯಾದರೆ ನಷ್ಟದ ಹೊರೆ ರೈತರ ಹೆಗಲೇರುತ್ತದೆ’ ಎಂಬುದು ಬೆಳೆಗಾರ ಸದಾನಂದ ಗೌಡ ಅವರ ಅಭಿಮತ.
ಮೆಕ್ಕೆಜೋಳಕ್ಕೆ ಯಾವಾಗಲೂ ಇಷ್ಟೊಂದು ಬೇಡಿಕೆ ಬಂದಿರಲಿಲ್ಲ. ಪ್ರಸ್ತುತ ₹ 2500ರ ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ. ಮುಂದಿನ ದಿನಗಳಲ್ಲಿ ದರ ಹೆಚ್ಚಾಗಬಹುದುವೀರಭದ್ರಪ್ಪ ಜಡ್ಡಳ್ಳಿ ಮೆಕ್ಕೆಜೋಳ ಬೆಳೆಗಾರ
ಕಳೆದ ವರ್ಷಕ್ಕಿಂತ ಈ ಬಾರಿ ಬಿತ್ತನೆ ಪ್ರಮಾಣ ಕಡಿಮೆಯಾಗಿದ್ದು ಅತಿವೃಷ್ಠಿಯಿಂದ ಇಳುವರಿ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಲೆಯಲ್ಲಿ ಏರಿಳಿತ ಕಾಣಬಹುದುಆಶಾ ಕಾರ್ಯದರ್ಶಿ ಎಪಿಎಂಸಿ ಸೊರಬ
ಕೋಳಿ ಸಾಕಣೆ: ಬೇಡಿಕೆ ಹೆಚ್ಚಳ
ಈ ಮೊದಲು ಕೋಳಿ ಆಹಾರ ಸೇರಿ ಕೆಲವು ಉದ್ಯಮಗಳಿಗೆ ಸೀಮಿತವಾಗಿದ್ದ ಮೆಕ್ಕೆಜೋಳವು ಈಗ ಎಥೆನಾಲ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಇದರಿಂದ ಭಾರಿ ಬೇಡಿಕೆ ಬಂದಿದೆ. ಆರಂಭದಲ್ಲೇ ಉತ್ತಮ ಧಾರಣೆಯಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ಕೋಳಿ ಸಾಕಣೆಯಲ್ಲಿ ಮೆಕ್ಕೆಜೋಳವೇ ಪ್ರಮುಖ ಆಹಾರವಾಗಿದೆ. ಈಗ ಮೆಕ್ಕೆಜೋಳದ ದರ ಏರಿಕೆಯಾಗಿರುವುದು ಮುಂದಿನ ದಿನಗಳಲ್ಲಿ ಮೊಟ್ಟೆ ಹಾಗೂ ಕೋಳಿ ಮಾಂಸದ ದರ ಏರಿಕೆಗೆ ಕಾರಣವಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.