ತೀರ್ಥಹಳ್ಳಿ: ಅಕ್ರಮ ಮಧ್ಯ ಮಾರಾಟ ಮಾಡದಂತೆ ಸೂಚನೆ ನೀಡಲು ತೆರಳಿದ್ದ ಮೇಳಿಗೆ ಗ್ರಾಮ ಪಂಚಾಯಿತಿ ಪಿಡಿಒ ಸರಿತಾ ಅವರ ಮೇಲೆ ಅಕ್ರಮ ಮದ್ಯ ವ್ಯಾಪಾರಿ, ಮತ್ತವರ ಕುಟುಂಬದವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ವಿವಿಧ ಅಧಿಕಾರಿಗಳ ಸಂಘಟನೆಯಿಂದ ಸೋಮವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಹಲ್ಲೆಗೊಳಗಾದ ಪಿಡಿಒ ತಾಲ್ಲೂಕು ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
‘ಗಾಂಧಿ ಜಯಂತಿಯಂದು ಅಕ್ರಮ ಮದ್ಯ ಮಾರಾಟ ಸಂಬಂಧ ಕಂತುಗದ್ದೆ ನಾಗೇಶ್ ಅವರ ಮನೆಗೆ ಪಿಡಿಒ ಹೋಗಿದ್ದಾರೆ. ಪರಿಶೀಲನೆ ನಡೆಸುವ ವೇಳೆ ಮಾತಿನ ಚಕಮಕಿ ನಡೆದು ಪಿಡಿಒ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಪ್ರತಿಭಟನನಿರತರು ದೂರಿದರು.
ನಾಗೇಶ್ ಮತ್ತವರ ಕುಟುಂಬದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇನ್ನೂ ನಾಗೇಶ್ ಬಂಧನ ನಡೆದಿಲ್ಲ. ಕೃತ್ಯಕ್ಕೆ ಕಾರಣವಾದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ತಾಲ್ಲೂಕು ಘಟಕ ಮತ್ತು ನೌಕರರ ಸಂಘದ
ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.