ADVERTISEMENT

ನಟ ದರ್ಶನ್ ಭೇಟಿ ಮಾಡಿದ ಪುಟಾಣಿ ಈಜುಪಟು ಮಿಥಿಲಾ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 13:37 IST
Last Updated 23 ಡಿಸೆಂಬರ್ 2020, 13:37 IST
ಚಿತ್ರನಟ ದರ್ಶನ್ ಜೊತೆ ಈಜುಪಟು ಮಿಥಿಲಾ
ಚಿತ್ರನಟ ದರ್ಶನ್ ಜೊತೆ ಈಜುಪಟು ಮಿಥಿಲಾ   

ಸಾಗರ: ತಾಲ್ಲೂಕಿನ ಕಿಪ್ಪಡಿ ಗ್ರಾಮದ ಪುಟಾಣಿ ಈಜುಪಟು ಮಿಥಿಲಾ ಕಳೆದ ವರ್ಷ ಕಳಸವಳ್ಳಿ-ಅಂಬಾರಗೋಡ್ಲು (ಸಿಗಂದೂರು ಮಾರ್ಗ) ನಡುವೆ ಶರಾವತಿ ಹಿನ್ನೀರಿನಲ್ಲಿ 2.5 ಕಿ.ಮೀ. ಈಜುವ ಮೂಲಕ ಸುದ್ದಿ ಮಾಡಿದ್ದಳು. ಆಗ ಆಕೆಗೆ ವಯಸ್ಸು ಕೇವಲ 3ವರ್ಷ 9 ತಿಂಗಳು ಮಾತ್ರ.

ಈಚೆಗೆ ಚಿತ್ರನಟ ದರ್ಶನ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡುವ ಮಿಥಿಲಾ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ. ಈ ಭೇಟಿಯ ಹಿಂದೆ ಸ್ವಾರಸ್ಯಕರ ಕತೆಯೊಂದಿದೆ.

ಕಿಪ್ಪಡಿ ಗ್ರಾಮದ ಗಿರೀಶ್, ವಿನುತಾ ದಂಪತಿ ಪುತ್ರಿ ಮಿಥಿಲಾ ಚಿತ್ರನಟ ದರ್ಶನ್ ಅವರ ಅಪ್ಪಟ ಅಭಿಮಾನಿ. ಕಳೆದ ವರ್ಷ ಆಕೆಗೆ 2.5 ಕಿ.ಮೀ ದೂರ ಈಜಬೇಕು ಎಂಬ ವಿಷಯ ಬಂದಾಗ ‘ನಾನು ಯಾಕೆ ಅಷ್ಟು ದೂರ ಈಜಬೇಕು’ ಎಂಬ ಪ್ರಶ್ನೆಯನ್ನು ಪೋಷಕರಿಗೆ ಕೇಳಿದ್ದಳು.

ADVERTISEMENT

ಮಿಥಿಲಾ ದರ್ಶನ್ ಅಭಿಯಾನಿಯಾಗಿರುವುದರಿಂದ ಪೋಷಕರು ಒಂದು ಉಪಾಯ ಮಾಡಿದ್ದರು. ‘ನೀನು 2.5 ಕಿ.ಮೀ. ದೂರ ಈಜಿದರೆ ಆಚೆಯ ದಡದಲ್ಲಿ ದರ್ಶನ್ ನಿನಗಾಗಿ ಕಾಯುತ್ತಿದ್ದಾರೆ’ ಎಂದು ಹೇಳಿ ನಂಬಿಸಿದ್ದರು. ಈಜಿ ದಡಕ್ಕೆ ಸೇರಿದ ನಂತರ ಮಿಥಿಲಾಗೆ ನಟ ದರ್ಶನ್ ಅವರ ದರ್ಶನವಾಗಿರಲಿಲ್ಲ.

ಅಂದಿನಿಂದ ಮಿಥಿಲಾ ದರ್ಶನ್ ಅವರನ್ನು ಭೇಟಿ ಮಾಡಿಸುವಂತೆ ಪೋಷಕರಿಗೆ ದುಂಬಾಲು ಬಿದ್ದಿದ್ದಳು. ಈ ವಿಷಯ ಹೇಗೋ ದರ್ಶನ್ ಕಿವಿಗೆ ತಲುಪಿದೆ. ಮಿಥಿಲಾರ ಪೋಷಕರಿಗೆ ಕರೆ ಮಾಡಿದ ದರ್ಶನ್ ಬೆಂಗಳೂರಿನ ತಮ್ಮ ಮನೆಗೆ ಮಿಥಿಲಾಳನ್ನು ಪೋಷಕರೊಂದಿಗೆ ಕರೆಸಿಕೊಂಡು ಆಕೆಯ ಆಸೆ ಪೂರೈಸಿದ್ದಾರೆ.

ಮಿಥಿಲಾಗೆ ಉಡುಗೊರೆಯನ್ನು ನೀಡಿದ ದರ್ಶನ್‌ ಆಕೆಯನ್ನು ಬೀಳ್ಕೊಟ್ಟಿದ್ದಾರೆ. ಮಿಥಿಲಾ ಜೊತೆಗೆ ಈಜು ತರಬೇತುದಾರರಾದ ಹರೀಶ್ ನವಾತೆ, ಎನ್.ಸಿ. ಗಂಗಾಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.