ADVERTISEMENT

ಸೂರಗೊಂಡನಕೊಪ್ಪಗೆ ಶೀಘ್ರ 'ಭಾಯ್‌ಗಡ್‌' ರೈಲು ನಿಲ್ದಾಣ: ಸಂಸದ ಬಿ.ವೈ.ರಾಘವೇಂದ್ರ

ಬಂಜಾರ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 13:30 IST
Last Updated 7 ಜುಲೈ 2021, 13:30 IST
ಶಿವಮೊಗ್ಗದ ಬಾಲರಾಜ ಅರಸು ರಸ್ತೆಯಲ್ಲಿ ಜಿಲ್ಲಾ ಬಂಜಾರ ಸಂಘ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಶಂಕುಸ್ಥಾಪನೆ ನೇರವೇರಿಸಿದರು.
ಶಿವಮೊಗ್ಗದ ಬಾಲರಾಜ ಅರಸು ರಸ್ತೆಯಲ್ಲಿ ಜಿಲ್ಲಾ ಬಂಜಾರ ಸಂಘ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಸಂಸದ ಬಿ.ವೈ.ರಾಘವೇಂದ್ರ ಬುಧವಾರ ಶಂಕುಸ್ಥಾಪನೆ ನೇರವೇರಿಸಿದರು.   

ಶಿವಮೊಗ್ಗ:ಬಂಜಾರ ಸಮುದಾಯದ ಪವಿತ್ರ ಕ್ಷೇತ್ರ ಸೂರಗೊಂಡನಕೊಪ್ಪಕ್ಕೆ ಶೀಘ್ರ ರೈಲು ಸಂಪರ್ಕ ದೊರಕಲಿದೆ. ಶಿಕಾರಿಪುರ–ರಾಣೇಬೆನ್ನೂರು ಮಾರ್ಗದ ರೈಲು ನಿಲುಗಡೆಗೆ ಸುಸಜ್ಜಿತ ನಿಲ್ದಾಣ ನಿರ್ಮಿಸಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಬಾಲರಾಜ ಅರಸು ರಸ್ತೆಯಲ್ಲಿ ಜಿಲ್ಲಾ ಬಂಜಾರ ಸಂಘ ನಿರ್ಮಿಸುತ್ತಿರುವ ಸಮುದಾಯ ಭವನಕ್ಕೆ ಬುಧವಾರ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.

ಸೇವಾಲಾಲ್ ಮಯರಿಯಮ್ಮನ ದೇವಸ್ಥಾನಕ್ಕೆ ಹೋಗಲು ರೈಲು ಉಪನಿಲ್ದಾಣ ರಚಿಸಲು ನಿರ್ಧರಿಸಲಾಗಿದೆ. ಈ ನಿಲ್ದಾಣಕ್ಕೆ ಭಾಯ್‌ಗಡ್ ರೈಲುನಿಲ್ದಾಣ ಎಂದು ನಾಮಕರಣ ಮಾಡಲಾಗುವುದು. ಸೂರಗೊಂಡನಕೊಪ್ಪಕ್ಕೆ ಸಂಪರ್ಕ ಕಲ್ಪಿಸಲೆಂದೇ ಸರ್ವೆ ಸ್ಕೆಚ್‌ ಬದಲಾಯಿಸಲಾಗಿದೆ. ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 1,400 ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣಗೊಳ್ಳಲಿದೆ ಎಂದರು.

ADVERTISEMENT

ಬಂಜಾರ ಸಮುದಾಯ ತನ್ನದೇ ಆದ ಸಂಸ್ಕೃತಿ ಹೊಂದಿದೆ. ರಾಜ್ಯದಲ್ಲಿ ಮೊದಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಒಂದು ಅಭಿವೃದ್ದಿ ನಿಗಮ ಇತ್ತು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಿದರು. ತಾಂಡಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಮೂಲಕ ಲಂಬಾಣಿ ಸಮುದಾಯದ ಏಳಿಗೆಗೆ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ ಆಶೋಕ್ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಶಾಸಕರಾದ ಆಯನೂರು ಮಂಜುನಾಥ್, ಪಿ.ರಾಜೀವ್, ಎಸ್.ರುದ್ರೇಗೌಡ, ‘ಸೂಡಾ’ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ರಾಜ್ಯ ಆರ್ಯವೈಶ್ಯ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.